ಮಂದಾರ್ತಿ ಮೇಳದ ಮಹಿಷಾಸುರ ವೇಷಧಾರಿ ಈಶ್ವರ ಗೌಡ ನೆಮ್ಮಾರ್
ಮುಖದ ಬಣ್ಣ ತೆಗೆಯುವ ಮುನ್ನವೇ ಸೆಳೆದೊಯ್ದ ವಿಧಿ
ಉಡುಪಿ: ಯಕ್ಷಗಾನ ಕಲಾವಿದರೊಬ್ಬರು ಚೌಕಿಯಲ್ಲಿ ಬಣ್ಣ ಕಳಚುತ್ತಿರುವಾಗಲೇ ಹೃದಯಾಘಾತದಿಂದ ಮೃತಪಟ್ಟ ಘಟನೆ ಬುಧವಾರ ತಡರಾತ್ರಿ ಸಂಭವಿಸಿದೆ. ಮಂದಾರ್ತಿ ಮೇಳದ ಬಣ್ಣದ ವೇಷಗಾರ ಈಶ್ವರ ಗೌಡ ನೆಮ್ಮಾರ್ ತೀರಿಕೊಂಡಿರುವ ಕಲಾವಿದ.

ಕುಂದಾಪುರ ಸಮೀಪ ಸೌಡ ಎಂಬಲ್ಲಿ ನಿನ್ನೆ ರಾತ್ರಿ ದೇವಿ ಮಹಾತ್ಮೆ ಪ್ರಸಂಗ ಯಕ್ಷಗಾನವಿತ್ತು. ಈಶ್ವರ ಗೌಡ ನೆಮ್ಮಾರ್ ಮಹಿಷಾಸುರನ ಪಾತ್ರ ಮಾಡಿದ್ದರು. ಪಾತ್ರ ಮುಗಿದ ಬಳಿಕ ತಡರಾತ್ರಿ ಚೌಕಿಯಲ್ಲಿ ವೇಷ ಕಳಚುತ್ತಿರುವಂತೆಯೇ ಹೃದಯಾಘಾತವಾಗಿದೆ. ಕಿರೀಟ, ವೇಷಭೂಷಣಗಳನ್ನು ಕಳಚುತ್ತಿರುವಾಗ ಅವರು ಕುಸಿದು ಬಿದ್ದಿದ್ದಾರೆ. ಸಹಕಲಾವಿದರು ಆಸ್ಪತ್ರಗೆ ಸೇರಿಸುವ ಮುನ್ನವೇ ಇಹಲೋಕ ತ್ಯಜಿಸಿದ್ದಾರೆ. ಮುಖದ ಬಣ್ಣವಿನ್ನೂ ಅವರು ತೆಗೆದಿರಲಿಲ್ಲ. ಆಗಲೇ ವಿಧಿ ಅವರನ್ನು ಸೆಳೆದೊಯ್ದಿದೆ.
ಮಂದಾರ್ತಿ ಮೇಳದ ಎರಡನೇ ಮೇಳದ ಬಣ್ಣದ ವೇಷಗಾರರಾಗಿರುವ ಈಶ್ವರ ಗೌಡ ನೆಮ್ಮಾರ್ ಶೃಂಗೇರಿಯವರು. ಪ್ರತಿಭಾವಂತ ಕಲಾವಿದನಾಗಿದ್ದರು. ವಿಶೇಷವಾಗಿ ಮಹಿಷಾಸುರ ವೇಷ ಅವರಿಗೆ ಪ್ರಸಿದ್ಧಿಯನ್ನು ತಂದುಕೊಟ್ಟಿತ್ತು. ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
























