ವೀರಮಂಗಲ: ಇಲ್ಲಿನ ಪಿಎಂಶ್ರೀ ಶಾಲಾ ಹಿರಿಯ ವಿದ್ಯಾರ್ಥಿಗಳ ವಾರ್ಷಿಕ ಕ್ರೀಡಾಕೂಟವು ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು.
ಕ್ರೀಡಾಕೂಟದ ಉದ್ಘಾಟನೆಯನ್ನು ಹಿರಿಯ ವಿದ್ಯಾರ್ಥಿ, ನಿವೃತ್ತ ಸೈನಿಕ ಮನಮೋಹನ ಗುತ್ತು ನೆರವೇರಿಸಿ ಪ್ರಾಥಮಿಕ ಶಿಕ್ಷಣ ನೀಡಿದ ವೀರಮಂಗಲ ಶಾಲೆಯು ನಮ್ಮ ಬದುಕಿನ ಭದ್ರ ಬುನಾದಿಯಾಗಿದೆ. ಅಂದಿನ ಸಿಹಿ ನೆನಪುಗಳು ಈ ಶಾಲೆಗೆ ಬರುವಾಗ ಮರುಕಳಿಸುತ್ತದೆ ಎಂದರು.
ಮುಖ್ಯ ಅತಿಥಿ ನಿವೃತ್ತ ಮುಖ್ಯಗುರುಗಳಾದ ಮೋನಪ್ಪ ಗೌಡ ಇವರು ಶುಭಹಾರೈಸಿದರು .
ಹಿರಿಯ ವಿದ್ಯಾರ್ಥಿ ಪ್ರಸ್ತುತ ಉಡುಪಿಯ ಆನಂದ ತೀರ್ಥ ವಿದ್ಯಾಲಯದ ದೈಹಿಕ ಶಿಕ್ಷಣ ಶಿಕ್ಷಕಿ ಮಮತಾ ಶಂಕರ್ ಇವರು ಮಾತನಾಡಿ ನನ್ನ ಬದುಕು ರೂಪಿಸಿದ ನನ್ನ ಶಾಲೆ ವೀರಮಂಗಲ ಎಂದೆಂದಿಗೂ ಮನಪಟಲದಲ್ಲಿ ಇದೆ. ಇಲ್ಲಿನ ಮಕ್ಕಳ ಶೈಕ್ಷಣಿಕ ಬೆಳವಣಿಗೆ ಕೇಳಿ ದೂರದಿಂದಲೆ ಖುಷಿ ಪಡುತ್ತಿದ್ದೇನೆ ಎಂದರು.
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಸಂತ ವೀರಮಂಗಲ ಸ್ವಾಗತಿಸಿದರು. ಎಸ್ ಡಿ ಎಂ ಸಿ ಅಧ್ಯಕ್ಷ ರವಿಚಂದ್ರ ಅತಿಥಿಗಳನ್ನು ಗೌರವಿಸಿದರು. ಮುಖ್ಯ ಶಿಕ್ಷಕ ತಾರಾನಾಥ ಸವಣೂರು ಕಾರ್ಯಕ್ರಮ ನಿರೂಪಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಗೋಪಾಲಕೃಷ್ಣ ವಂದಿಸಿದರು.
ಬಳಿಕ ಹಿರಿಯ ವಿದ್ಯಾರ್ಥಿಗಳ ಕ್ರಿಡಾಕೂಟ ಸಲೀಂ,ಪಾರೂಕ್, ಮತ್ತು ಯೋಗೀಶ್ ಇವರ ಸಂಯೋಜನೆಯಲ್ಲಿ ನಡೆಯಿತು. ನೂರಾರು ಹಿರಿಯ ವಿದ್ಯಾರ್ಥಿಗಳು ಪಾಲ್ಗೊಂಡರು.
























