ಕಡಬ: ಮೀನು ಮಾರಾಟದ ವಿಚಾರವಾಗಿ ಎರಡು ಅಂಗಡಿಯವರ ನಡುವೆ ಮಾತಿನ ಚಕಮಕಿ ನಡೆದು ಬಳಿಕ ಪರಸ್ಪರ ಹೊಡೆದಾಡಿಕೊಂಡ ಘಟನೆ ಕಡಬ ಗ್ರಾಮದ ಸಂತೆಕಟ್ಟೆ ಬಳಿ ಮೀನು ಮಾರುಕಟ್ಟೆಯಲ್ಲಿ ಶನಿವಾರ ನಡೆದಿದೆ.
ಇದರ ವಿಡಿಯೋ ವೈರಲ್ ಆದ ಬಳಿಕ ಪೊಲೀಸರ ಗಮನಕ್ಕೆ ಬಂದಿದ್ದು, ಇದನ್ನು ಆಧರಿಸಿ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಂತೆಕಟ್ಟೆ ಬಳಿಯ ಮೀನು ಮಾರುಕಟ್ಟೆಯಲ್ಲಿ ಶನಿವಾರ ಮೀನು ಮಾರಾಟದ ವಿಚಾರವಾಗಿ ರಾಜು ಮ್ಯಾಥ್ಯೂ ಹಾಗೂ ಆದಂ ಎಂಬ ಎರಡು ಅಂಗಡಿಯವರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪರಸ್ಪರ ಹೊಡೆದಾಡಿಕೊಂಡಿದ್ದರು. ಹೊಡೆದಾಟದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದನ್ನು ಪರಿಶೀಲಿಸಿದ ಕಡಬ ಠಾಣಾ ಉಪ ನಿರೀಕ್ಷಕ ಅಭಿನಂದನ್ ಎಂ.ಎಸ್., ಸಾರ್ವಜನಿಕ ಸ್ಥಳದಲ್ಲಿ ಪರಸ್ಪರ ಹೊಡೆದಾಡಿಕೊಂಡು ಸಾರ್ವಜನಿಕ ಶಾಂತಿಭಂಗ ಉಂಟಾಗುವಂತೆ ಮಾಡಿದ ಆರೋಪದಲ್ಲಿ ರಾಜು ಮ್ಯಾಥ್ಯೂ, ಆದಂ, ಫಯಾಝ್, ರಕ್ಷಿತ್ ಮಾಣಿ, ನೌಫಲ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
























