ಕಾಂಗ್ರೆಸ್ ಸರ್ಕಾರದಿಂದ ರೌಡಿಯಿಸಂ, ಬೆದರಿಕೆ ತಂತ್ರ ಎಂದು ಆರೋಪ
ಬೆಂಗಳೂರು : ಶಾಲಾ ಆವರಣದಲ್ಲಿ ಹೊರಗಿನ ಸಂಘಟನೆಗಳಿಂದ ಕಾರ್ಯಕ್ರಮ ಮಾಡುವುದನ್ನು ನಿಷೇಧಿಸುವ ಬಗ್ಗೆ ಹಿಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆದೇಶ ಮಾಡಿರುವುದಕ್ಕೆ ಸಾಕ್ಷಿ ಇಲ್ಲ. ಇದು ಅಂದಿನ ಬಿಜೆಪಿ ಸರ್ಕಾರದ ಸಚಿವ ಸಂಪುಟದಲ್ಲಿ ಚರ್ಚೆಯಾಗಿರಲಿಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಚಾಮರಾಜಪೇಟೆಯ ಒಂದು ಶಾಲೆಗೆ ಸಂಬಂಧಿಸಿದಂತೆ ಒಂದು ಆದೇಶವಾಗಿತ್ತು. ಇದನ್ನು ಎಲ್ಲದ್ದಕ್ಕೂ ಅನ್ವಯಿಸಿ ಮಾರ್ಪಾಡು ಮಾಡಿ ಈಗಿನ ಸರ್ಕಾರ ಆದೇಶ ಮಾಡಿದೆ. ಜಗದೀಶ್ ಶೆಟ್ಟರ್ ಅಥವಾ ಅಂದಿನ ಸಚಿವರ ಸಹಿ ಇರುವ ಆದೇಶವಿದ್ದರೆ ಅದನ್ನು ಬಹಿರಂಗ ಮಾಡಲಿ ಎಂದು ಆರ್.ಅಶೋಕ್ ಸವಾಲು ಹಾಕಿದ್ದಾರೆ.
ಆರ್ಎಸ್ಎಸ್ ಆರಂಭವಾಗಿ 100 ವರ್ಷದ ಬಳಿಕ ಪಥ ಸಂಚಲನದ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿದೆ. ಇಷ್ಟು ವರ್ಷ ಇಲ್ಲದ ಸಮಸ್ಯೆ ಈಗ ಬಂದಿದೆ. ಪ್ರತಿ ಶುಕ್ರವಾರ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ರಸ್ತೆಯಲ್ಲಿ ನಮಾಜ್ ಮಾಡುತ್ತಾರೆ. ಇದರಿಂದ ಟ್ರಾಫಿಕ್ ಸಮಸ್ಯೆ ಆಗುವುದಿಲ್ಲವೇ? ರಂಜಾನ್, ಈದ್ ಮಿಲಾದ್ ವೇಳೆ ರಸ್ತೆ ಬಂದ್ ಮಾಡುತ್ತಾರೆ. ಆಗ ಯಾರೂ ಅನುಮತಿ ಪಡೆದಿರುವುದಿಲ್ಲ. ಕೆಲವು ಕಡೆ ಮೆರವಣಿಗೆಯಲ್ಲಿ ಕತ್ತಿ ಹಿಡಿದು ಆಚರಣೆ ಮಾಡುತ್ತಾರೆ. ಅದನ್ನು ಶಸ್ತ್ರಾಸ್ತ್ರಗಳು ಎಂದು ಪರಿಗಣಿಸುವುದಿಲ್ಲ. ಆರ್ಎಸ್ಎಸ್ ಪಥ ಸಂಚಲನದಲ್ಲಿ ಎಂದೂ ಯಾರಿಗೂ ಹಾನಿಯಾಗಿಲ್ಲ ಎಂದು ವ್ಯಕ್ತಪಡಿಸಿದ್ದಾರೆ.
ಜಾತಿ ಸಮೀಕ್ಷೆಗೆ ಮಾಹಿತಿ ನೀಡದವರಿಗೆ ಕಾಂಗ್ರೆಸ್ ಸರ್ಕಾರ ಧಮಕಿ ಹಾಕುತ್ತಿದೆ. ಇದು ರೌಡಿಸಂ ಮಾಡುವ ಸರ್ಕಾರ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವ ಜಾತಿ ಸಮೀಕ್ಷೆಯಲ್ಲಿ ಎಲ್ಲರೂ ಭಾಗವಹಿಸಿಲ್ಲ. ಇನ್ಫೋಸಿಸ್ ಸುಧಾಮೂರ್ತಿ ಜಾತಿ ಸಮೀಕ್ಷೆಗೆ ಮಾಹಿತಿ ನೀಡಿಲ್ಲವೆಂದಾಕ್ಷಣ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಶಿವರಾಜ್ ತಂಗಡಗಿ ಧಮಕಿ ಹಾಕಿದ್ದಾರೆ ಎಂದು ಅವರು ಆಪಾದಿಸಿದರು.
ಸರ್ಕಾರವೇ ಇಲ್ಲಿ ರೌಡಿಸಂ ಮಾಡುತ್ತಿದೆ. ಮಾಹಿತಿ ನೀಡುವುದು ಜನರ ಇಚ್ಚೆ ಎಂದು ಹೈಕೋರ್ಟ್ ಹೇಳಿದ್ದರೂ ಸರ್ಕಾರ ಅದನ್ನು ಉಲ್ಲಂಘಿಸಿ ಗೂಂಡಾಗಿರಿ ತೋರುತ್ತಿದೆ. ಜಾತಿ ಸಮೀಕ್ಷೆ ಮಾಡುವುದೇ ಅಕ್ರಮವಾಗಿದ್ದು, ಈ ರೀತಿ ಬೆದರಿಕೆ ಹಾಕುವುದು ಮತ್ತೊಂದು ಅಕ್ರಮವಾಗಿದೆ ಎಂದು ಹೇಳಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಉದ್ಯಮಿಗಳ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ರಸ್ತೆ ಸರಿ ಇಲ್ಲ ಎಂದರೆ ನೀತಿಪಾಠ ಹೇಳುತ್ತಾರೆ. ಮೋಹನ್ದಾಸ್ ಪೈ ಹಾಗೂ ಕಿರಣ್ ಮಜುಂದಾರ್ ಶಾ ಪ್ರಶ್ನೆ ಮಾಡಿದರೆ ಅದನ್ನು ಟೀಕೆ ಮಾಡಿದ್ದಾರೆ. ಬೆಂಗಳೂರಿಂದ ಎಲ್ಲವನ್ನೂ ಪಡೆದಿದ್ದಾರೆ ಎನ್ನಲು ಈ ನಗರವನ್ನು ಸಿಎಂ ಸಿದ್ದರಾಮಯ್ಯ ಅಥವಾ ಡಿ.ಕೆ.ಶಿವಕುಮಾರ್ ಕಟ್ಟಿ ಬೆಳೆಸಿಲ್ಲ ಎಂದು ಆರ್.ಅಶೋಕ ಕಿಡಿಕಾರಿದರು.
ತೆರಿಗೆ ಕಟ್ಟುವವರಿಗೆ ಪ್ರಶ್ನೆ ಕೇಳುವ ಅಧಿಕಾರವೂ ಇದೆ. ಬಿಜೆಪಿ ಸರ್ಕಾರವಿದ್ದಾಗಲೂ ಇದೇ ಉದ್ಯಮಿಗಳು ಟ್ವೀಟ್ ಮಾಡಿ ಪ್ರಶ್ನೆ ಕೇಳಿದ್ದರು. ಆಗ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಕೂಡಲೇ ಹಣ ಬಿಡುಗಡೆ ಮಾಡಿ ರಸ್ತೆ ದುರಸ್ತಿ ಮಾಡಲಾಗಿತ್ತು. ಸಮಸ್ಯೆ ಬಂದಾಗ ತೆಗಳುವುದು ಬಿಟ್ಟು ಸಮಸ್ಯೆ ಬಗೆಹರಿಸಲಿ. ರಸ್ತೆಗುಂಡಿ ಮುಚ್ಚಲು 2,000 ಕೋಟಿ ರೂ. ಖರ್ಚು ಮಾಡಿದ್ದೇವೆ ಎಂದರೂ ಅದರ ಫಲಿತಾಂಶ ಕಾಣುತ್ತಿಲ್ಲ. ಈ ಹಣ ಎಲ್ಲಿ ಹೋಗಿದೆ ಎಂದು ಸರ್ಕಾರ ನೋಡಬೇಕಿದೆ ಎಂದು ಆರ್.ಅಶೋಕ ಎಚ್ಚರಿಸಿದರು.
ಗೂಗಲ್ ಕಂಪನಿ ಬೆಂಗಳೂರು ಬಿಟ್ಟು ಆಂಧ್ರಪ್ರದೇಶವನ್ನು ಆಯ್ಕೆ ಮಾಡಿಕೊಂಡಿದೆ. ಉದ್ಯಮಿಗಳನ್ನು ಓಡಿಸಿ ಇವರು ಯಾವ ರೀತಿಯ ಅಭಿವೃದ್ಧಿ ಮಾಡುತ್ತಾರೆ? ನಗರದಲ್ಲಿ ಮಳೆ ನಿಂತಿದೆ. ಆದರೂ ಮಳೆ ಬರುತ್ತಿದೆ ಎಂದು ಬೃಹಸ್ಪತಿ ಸಿದ್ದರಾಮಯ್ಯ ನೆಪ ಹೇಳುತ್ತಿದ್ದಾರೆ. ಮಳೆ ಬರುವ ಮುನ್ನವೇ ರಸ್ತೆ ಡಾಂಬರೀಕರಣ ಮಾಡಬೇಕಿತ್ತು. ಉದ್ಯಮಿಗಳೇ ರಸ್ತೆ ನಿರ್ಮಿಸುತ್ತೇವೆ ಎಂದಿದ್ದು, ಇದು ಸರ್ಕಾರಕ್ಕೆ ದೊರೆತ ಛೀಮಾರಿ ಎಂದು ಅಶೋಕ ಲೇವಡಿ ಮಾಡಿದರು.
























