ಬಟ್ಟೆ ಬದಲಾಯಿವಾಗ ವಿಡಿಯೋ ಮಾಡಿದ್ದ ಯುವತಿ
ಮಂಗಳೂರು : ಇಬ್ಬರು ಸ್ನೇಹಿತೆಯರು ಬಟ್ಟೆ ಬದಲಾಯಿಸುವ ವೇಳೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ ಆರೋಪದಡಿ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಳಸದ ಪ್ರಸಕ್ತ ನಗರದ ಕಂಕನಾಡಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ನಿರೀಕ್ಷಾ ಎಂಬಾಕೆಯನ್ನು ಕದ್ರಿ ಪೋಲೀಸರು ಭಾನುವಾರ ಬಂಧಿಸಿದ್ದಾರೆ.
ಆರೋಪಿ ನಿರೀಕ್ಷಾಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆಕೆಗೆ ಎರಡು ವಾರಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನಿರೀಕ್ಷಾಳ ಸ್ನೇಹಿತೆಯರಾದ ಇಬ್ಬರು ಯುವತಿಯರು ಕದ್ರಿ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.
ಇತ್ತೀಚೆಗೆ ಬೆಳ್ಮಣ್ನ ಲಾಡ್ಜ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಕಾರ್ಕಳದ ನಿಟ್ಟೆ ಸಮೀಪದ ಪರಪ್ಪಾಡಿಯ ಅಭಿಷೇಕ್ ಆಚಾರ್ಯ ತನ್ನ ಡೆತ್ನೋಟ್ನಲ್ಲಿ ನಿರೀಕ್ಷಾ ತನ್ನ ಸ್ನೇಹಿತೆಯರು ಬಟ್ಟೆ ಬದಲಾಯಿಸುವ ವಿಡಿಯೋ ಮಾಡಿ ಬೇರೆಯವರಿಗೆ ಕಳುಹಿಸಿರುವುದಾಗಿ ಬರೆದಿದ್ದ. ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆರೋಪಿ ನಿರೀಕ್ಷಾ, ಅಭಿಷೇಕ್ಗೂ ವಿಡಿಯೋ ಕಳುಹಿಸಿದ್ದಳು. ಆ ವಿಡಿಯೋ ಅಭಿಷೇಕ್ ಅಡ್ಮಿನ್ ಆಗಿದ್ದ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಫಾರ್ವರ್ಡ್ ಆಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಿರೀಕ್ಷಾ ಮತ್ತು ಇತರ ಮೂವರು ಸೇರಿ ಹನಿಟ್ರ್ಯಾಪ್ ಜಾಲದಲ್ಲಿ ತನ್ನನ್ನು ಸಿಲುಕಿಸಿದ್ದಾರೆ. ಅವರಿಗೆ ಕೆಲವು ರಾಜಕೀಯ ಮುಖಂಡರ ನೇರ ಸಂಪರ್ಕವಿರುವುದಾಗಿ ಬೆದರಿಸಿ ಹಣ ಸುಲಿದಿದ್ದಾರೆ ಎಂದು ಅಭಿಷೇಕ್ ಆಚಾರ್ಯ ಬರೆದಿದ್ದ ಎಂಟು ಪುಟಗಳ ಡೆತ್ನೋಟ್ ಬಹಿರಂಗವಾಗಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಅಭಿಷೇಕ್ ಆಚಾರ್ಯ ಆತ್ಮಹತ್ಯೆ ಮಾಡಿಕೊಂಡ ಬಳಿಕ ಹನಿಟ್ರ್ಯಾಪ್ ಮಾಡಿದವರ ಬಂಧನಕ್ಕಾಗಿ ಭಾರಿ ಒತ್ತಾಯ ಕೇಳೆಬಂದಿತ್ತು. ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರ ಬಹಳ ವೈರಲ್ ಆಗಿತ್ತು.
























