ದೀಪಾವಳಿಗೆ ದೇಶದಲ್ಲಿ ನಡೆಯುತ್ತಿದೆ ಭರ್ಜರಿ ಖರೀದಿ : ಪ್ರಧಾನಿ ಮೋದಿ ಖುಷ್‌

ಕಾರು, ಇಲೆಕ್ಟ್ರಾನಿಕ್ಸ್‌ ವಸ್ತು, ಚಿನ್ನ, ಬೆಳ್ಳಿ ಸೇರಿ ಎಲ್ಲ ವಸ್ತುಗಳು ಭರ್ಜರಿ ಸೇಲ್‌

ನವದೆಹಲಿ : ಈ ವರ್ಷದ ದೀಪಾವಳಿ ಭಾರತೀಯರ ಪಾಲಿಗೆ ವಿಶೇಷವಾಗಿದೆ. ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿದ್ದು, ಇದೆಲ್ಲ ಜಿಎಸ್‌ಟಿ ಇಳಿಕೆ ಪರಿಣಾಮ ಎನ್ನಲಾಗುತ್ತಿದೆ. ಧನತ್ರಯೋದಶಿ ಸಂದರ್ಭದಲ್ಲಿ ಏನಾದರೊಂದು ಹೊಸತು ವಸ್ತು ಖರೀದಿಸುವುದು ಭಾರತೀಯರ ಸಂಪ್ರದಾಯ. ಈ ವರ್ಷ ಧನತ್ರಯೋದಶಿ ಪ್ರಯುಕ್ತ ದೇಶಾದ್ಯಂತ ಈಗಾಗಲೇ 1 ಲಕ್ಷ ಕೋಟಿ ರೂ.ಗೂ ಅಧಿಕ ಮೊತ್ತದ ದಾಖಲೆ ವ್ಯಾಪಾರ ನಡೆದಿದೆ. ಚಿನ್ನ, ಬೆಳ್ಳಿ, ವಾಹನಗಳು, ಇಲೆಕ್ಟ್ರಾನಿಕ್ ವಸ್ತುಗಳು ಸೇರಿದಂತೆ ವಿವಿಧ ಉತ್ಪನ್ನಗಳ ಭರ್ಜರಿ ಮಾರಾಟವಾಗಿದೆ. ಇದು ಇತ್ತೀಚಿನ ವರ್ಷಗಳಲ್ಲೇ ಹಬ್ಬದ ಋತುವಿನಲ್ಲಿ ನಡೆದ ಅತಿ ದೊಡ್ಡ ವಹಿವಾಟು ಎಂದು ವ್ಯಾಪಾರಿ ಒಕ್ಕೂಟ ಅಂದಾಜಿಸಿದೆ. ಪ್ರಧಾನಿ ನರೇಂದ್ರ ಮೋದಿಯವರೇ ಈ ಸಂಭ್ರಮವನ್ನು ಜನರ ಜೊತೆಗೆ ಹಂಚಿಕೊಂಡಿದ್ದಾರೆ.

ಆಶ್ವಯುಜ ಮಾಸದ 13ನೇ ದಿನವನ್ನು ‘ಧನತ್ರಯೋದಶಿ’ ಎಂದು ಆಚರಿಸಲಾಗುತ್ತಿದೆ. ಈ ದಿನ ಆಭರಣ, ವಾಹನ ಇನ್ನಿತರ ವಸ್ತುಗಳನ್ನು ಖರೀದಿಸಿದರೆ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ. ಈ ವರ್ಷ ಕೇಂದ್ರ ಸರ್ಕಾರ ಜಿಎಸ್‌ಟಿ ದರ ಇಳಿಕೆ ಮಾಡಿದ್ದರಿಂದ ವಸ್ತುಗಳ ಬೆಲೆ ಇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಭರ್ಜರಿ ಖರೀದಿ ನಡೆಯುತ್ತಿದೆ.





















































 
 

ದೀಪಾವಳಿ ಹಬ್ಬದ ಸಂದರ್ಭದಲ್ಲಿ 60,000 ಕೋಟಿ ರೂ.ಗೂ ಅಧಿಕ ಮೊತ್ತದ ಚಿನ್ನ ಮತ್ತು ಬೆಳ್ಳಿ ಮಾರಾಟವಾಗಿದೆ. ದೆಹಲಿ ಮಾರುಕಟ್ಟೆಯಲ್ಲಿ 10,000 ಕೋಟಿ ರೂ.ಗಳ ಸ್ಥಳೀಯ ಉತ್ಪನ್ನಗಳು ಬಿಕರಿಯಾಗಿವೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.25 ಹೆಚ್ಚು. 15,000 ಕೋಟಿ ರೂ.ಗಳ ಅಡುಗೆ ಪಾತ್ರೆ ಮತ್ತು ಉಪಕರಣಗಳು, 10,000 ಕೋಟಿ ರೂ.ಗಳ ಇಒಲೆಕ್ಟ್ರಾನಿಕ್‌ ಮತ್ತು ಇಲೆಕ್ಟ್ರಿಕಲ್‌ ವಸ್ತುಗಳು, 3,000 ಕೋಟಿ ರೂ.ಗಳ ಆಲಂಕಾರಿಕ ಮತ್ತು ಪೂಜಾ ಉತ್ಪನ್ನಗಳು, 12,000 ಕೋಟಿ ರೂ.ಗಳ ಒಣಹಣ್ಣು, ಸಿಹಿತಿಂಡಿ ಮತ್ತು ವಾಹನಗಳು ಮಾರಾಟವಾಗಿವೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂಸದ ಪ್ರವೀಣ್ ಖಂಡೇಲ್ವಾಲ್ ಮಾಹಿತಿ ನೀಡಿದ್ದಾರೆ.

ಎರಡು ದಿನದಲ್ಲಿ 75 ಸಾವಿರ ಕಾರು ಸೇಲ್‌

ಧನ ತ್ರಯೋದಶಿ ಅಂಗವಾಗಿ ದೇಶದಲ್ಲಿ ಭರ್ಜರಿ ಕಾರು ಮಾರಾಟ ಆರಂಭವಾಗಿದ್ದು ಅ.18 ಮತ್ತು 19ರಂದು ಒಟ್ಟಾರೆ 50000 ಕಾರು ಮಾರಾಟವಾಗುವ ನಿರೀಕ್ಷೆ ಇದೆ. ಮಾರುತಿ ಸುಜುಕಿ ಶನಿವಾರ 40000ಕ್ಕೂ ಹೆಚ್ಚು ಕಾರು ವಿತರಿಸಿದೆ. ಭಾನುವಾರ ಇನ್ನೂ 10000ಕ್ಕೂ ಅಧಿಕ ಕಾರು ವಿತರಣೆ ಗುರಿ ಹಾಕಿಕೊಂಡಿದೆ. ಇನ್ನು ಹುಂಡೈ ಎರಡು ದಿನದಲ್ಲಿ 15000ಕ್ಕೂ ಹೆಚ್ಚು ಕಾರು ವಿತರಣೆ ಗುರಿ ಹೊಂದಿದೆ. ಇನ್ನು ಉಳಿದ ಕಂಪನಿಗಳ ಕಾರಿನ ವಿತರಣೆಯನ್ನು ಸೇರಿದರೆ ಅದು 75000 ದಾಟುವ ಸಾಧ್ಯತೆ ನಿಚ್ಚಳವಾಗಿದೆ.

ಗುಜರಾತಿನಲ್ಲಿ ಜೈನ ಸಮುದಾಯದವರೆಲ್ಲ ಒಟ್ಟು ಸೇರಿ ಒಂದೇ ದಿನ ಬರೋಬ್ಬರಿ 149 ಕೋಟಿ ರೂ.ಗೆ 186 ಲಕ್ಷುರಿ ಕಾರು ಖರೀದಿಸಿದ್ದಾರೆ. ಮಾತ್ರವಲ್ಲದೆ ಅದರಿಂದಲೇ 21 ಕೋಟಿ ರೂ. ರಿಯಾಯಿತಿ ಕೂಡ ಪಡೆದಿದ್ದಾರೆ. ಜೈನ ಸಮುದಾಯದವರಿಗಾಗಿ ಸ್ಥಾಪನೆಗೊಂಡಿರುವ ಜೈನ ಇಂಟರ್‌ನ್ಯಾಷನಲ್‌ ಟ್ರೇಡ್‌ ಆರ್ಗನೈಸೇಶನ್ (ಜೆಐಟಿಒ) ಸದಸ್ಯರು 149 ಕೋಟಿ ರೂ. ಕೊಟ್ಟು 186 ಅತ್ಯಾಧುನಿಕ ಕಾರುಗಳನ್ನು ಖರೀದಿಸಿದ್ದಾರೆ. ಈ ಕಾರುಗಳು ದುಬಾರಿ ಬೆಲೆಯದ್ದಾಗಿದ್ದು 60 ಲಕ್ಷ ರೂ.ನಿಂದ 1.34 ಕೋಟಿ ರೂ. ಮೌಲ್ಯವುಳ್ಳದಾಗಿದೆ. ಆದರೆ ಒಂದೇ ಬ್ರೋಕರ್‌ ಬಳಿ ಕಾರುಗಳನ್ನು ಬುಕ್ಕಿಂಗ್‌ ಮಾಡಿದ್ದರಿಂದ 21.22 ಕೋಟಿ ರೂ. ರಿಯಾಯಿತಿ ದೊರೆತಿದೆ. ದೇಶಾದ್ಯಂತ 65 ಸಾವಿರ ಸದಸ್ಯರನ್ನು ಹೊಂದಿರುವ ಈ ಸಂಸ್ಥೆ ಮರ್ಸಿಡಿಸ್‌, ಬಿಎಂಡಬ್ಲ್ಯೂ ಸೇರಿ 15 ಪ್ರಮುಖ ಕಂಪನಿಗಳ ಜತೆ ಮಾತುಕತೆ ನಡೆಸಿ ಡೀಲ್ ಕುದುರಿಸಿತ್ತು.

error: Content is protected !!
Scroll to Top