ಮೈಸೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿದೆ. ಮೈಸೂರು ಸಹ ಇದಕ್ಕೆ ಹೊರತಾಗಿಲ್ಲ. ಮೈಸೂರಿಗೆ ಎಸಿಪಿ ಆಗಹೇಕಾದರೆ ಒಂದು ಕೋಟಿ ರೂ. ಕೊಡಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.
ಇನ್ಸ್ಪೆಕ್ಟರ್ ಹುದ್ದೆಗೆ 75 ಲಕ್ಷ ರೂ., ಎಸ್ಐ ಹುದ್ದೆಗೆ 50 ಲಕ್ಷ ರೂ. ನೀಡಬೇಕು. ಈಗ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಸರ್ಕಾರಿ ಅಧಿಕಾರಿಗಳಲ್ಲ ಬದಲಾಗಿ ಶಾಸಕರ ಕೃಪಾ ಪೋಷಿತರು. ಸಿಕ್ಕ ಸಿಕ್ಕಲ್ಲೆಲ್ಲಾ ಅಕ್ರಮ, ಅನ್ಯಾಯ ನಡೆಯುತ್ತಿದೆ. ಈ ಬಗ್ಗೆ ಸಿ ಎಂ ಸಿದ್ದರಾಮಯ್ಯಗೆ ಮಾಹಿತಿ ಇದ್ದರೂ ಕೇಳಲಾಗುತ್ತಿಲ್ಲ. ಏಕೆಂದರೆ ವರ್ಗಾವಣೆ ದಂಧೆಯಲ್ಲಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಮತ್ತು ಅವರ ಸ್ನೇಹಿತರೇ ತೊಡಗಿಕೊಂಡಿದ್ದಾರೆ. ಉಸ್ತುವಾರಿ ಸಚಿವರು ಕೇವಲ ಹೆಸರಿಗೆ ಮಾತ್ರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸರ್ಕಾರದ ಆಡಳಿತದಲ್ಲಿ ಶಿಕ್ಷಣ ವ್ಯವಸ್ಥೆ ಹಾಳಾಗಿದೆ. ಶಿಕ್ಷಣದ ಬಗ್ಗೆ ಸಿದ್ದರಾಮಯ್ಯ ಮಾತನಾಡುತ್ತಾರೆ. ಆದರೆ ವಾಸ್ತವ ಭಿನ್ನವಾಗಿದೆ. ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ಪಾಠ, ಊಟ ಎರಡೂ ದೊರೆಯುತ್ತಿಲ್ಲ. ಮಕ್ಕಳು ಹಸಿವಿನಿಂದ ಬಳಲುತ್ತಿದ್ದಾರೆ. ಮೊದಲು ಅವರಿಗೆ ಆಹಾರ ಒದಗಿಸಲು ಕ್ರಮ ಕೈಗೊಳ್ಳಿ ಎಂದು ತಿಳಿಸಿದ್ದಾರೆ.
RSS ಬ್ಯಾನ್ ಮಾಡುವಂತೆ ಪ್ರಿಯಾಂಕ್ ಖರ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದ ಬಗೆಗೂ ಮಾತನಾಡಿದ ಅವರು, ಸಂಘದಿಂದ ರಾಜ್ಯದಲ್ಲಿ ಏನು ಅನಾಹುತ ಆಗಿದೆ?, ಹಾಗಾದರೆ ಯೂತ್ ಕಾಂಗ್ರೆಸ್ ಏನು, ಅಲ್ಲೇನು ನಡೆಯುತ್ತಿದೆ?, ಒಳ್ಳೆಯ ಕೆಲಸ ಮಾಡು ಎಂದು ಜನ ನಿನ್ನನ್ನು ಗೆಲ್ಲಿಸಿದ್ದಾರೆ. ನೀನು ಕೆಲಸಕ್ಕೆ ಬಾರದ ವಿಷಯಗಳನ್ನು ಇಟ್ಟುಕೊಂಡು ರಾಷ್ಟ್ರೀಯ ನಾಯಕನ ಹಾಗೆ ಗುರ್ತಿಸಿಕೊಳ್ಳಲು ಪ್ರಯತ್ನ ನಡೆಸುತ್ತಿದ್ದಿ ಎಂದು ಪ್ರಿಯಾಂಕ್ ವಿರುದ್ಧ ಹರಿಹಾಯ್ದಿದ್ದಾರೆ.
























