ಗೆದ್ದು ಅಜೇಯವಾಗಿ ಫೈನಲ್ ಪ್ರವೇಶಿಸಿ ಬೀಗಿದ ಭಾರತ
ದುಬೈ: ಭಾರತ ಮತ್ತು ಶ್ರೀಲಂಕಾ ನಡುವೆ ಶುಕ್ರವಾರ ರಾತ್ರಿ ನಡೆದ ಏಷ್ಯಾಕಪ್ ಸೂಪರ್ 4 ಪಂದ್ಯ ಸೂಪರ್ ಓವರ್ ತನಕ ಸಾಗಿ ರೋಚಕತೆ ಸೃಷ್ಟಿಸಿತು. ಸೂಪರ್ ಓವರ್ನಲ್ಲಿ ಶ್ರೀಲಂಕಾವನ್ನು ಮಣಿಸಿ ಭಾರತ ಅಜೇಯವಾಗಿ ಫೈನಲ್ ಪ್ರವೇಶಿಸಿದೆ. ಇದರೊಂದಿಗೆ ಭಾನುವಾರ ನಡೆಯುವ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಮುಖಾಮುಖಿಯಾಗಲಿದೆ.
ಆಟಕ್ಕುಂಟು ಲೆಕ್ಕಕ್ಕೆ ಇಲ್ಲದ ಪಂದ್ಯದಲ್ಲಿ ಪಾತುಮ್ ನಿಸ್ಸಂಕ ಅವರ ಸ್ಫೋಟಕ ಶತಕ, ಕುಸಾಲ್ ಪೆರೆರಾ ಅವರ ಅರ್ಧಶತಕದ ನೆರವಿನಿಂದ ಶ್ರೀಲಂಕಾ 5 ವಿಕೆಟ್ ನಷ್ಟಕ್ಕೆ 202 ರನ್ ಗಳಿಸುವ ಮೂಲಕ ಪಂದ್ಯ ಟೈನಲ್ಲಿ ಅಂತ್ಯವಾಯಿತು. ಆದರೆ ಸೂಪರ್ ಓವರ್ನಲ್ಲಿ ಸೂರ್ಯ ಕುಮಾರ್ ಮೊದಲ ಎಸೆತದಲ್ಲಿ 3 ರನ್ ಹೊಡೆಯುವ ಮೂಲಕ ಭಾರತ ರೋಚಕ ಜಯ ಗಳಿಸಿತು.
ಸೂಪರ್ ಓವರ್ನಲ್ಲಿ ಆರ್ಶ್ದೀಪ್ ಎಸೆದ ಮೊದಲ ಓವರ್ ಮೊದಲ ಎಸೆತವನ್ನು ಕುಸಲ್ ಪೆರೆರಾ ಸಿಕ್ಸ್ ಹೊಡೆಯಲು ಹೋಗಿ ರಿಂಕು ಸಿಂಗ್ಗೆ ಕ್ಯಾಚ್ ನೀಡಿದರು. ನಂತರ ಎರಡನೇ ಎಸೆತದಲ್ಲಿ ಒಂದು ರನ್ ಬಂತು. ನಂತರದ ಎರಡು ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. 4ನೇ ಎಸೆತ ವೈಡ್ ಆಯ್ತು. ನಂತರ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. 5 ಎಸೆತದಲ್ಲಿ ಶನಕ ಸಿಕ್ಸ್ ಸಿಡಿಸಲು ಹೋಗಿ ಜಿತೇಶ್ ಶರ್ಮಾಗೆ ಕ್ಯಾಚ್ ನೀಡಿದರು. ಸೂಪರ್ ಓವರ್ನಲ್ಲಿ ಎರಡು ವಿಕೆಟ್ ಪತನಗೊಂಡರೆ ಇನ್ನಿಂಗ್ಸ್ ಮುಗಿದ ಕಾರಣ ಲಂಕಾ ಭಾರತಕ್ಕೆ 3 ರನ್ಗಳ ಗುರಿಯನ್ನು ನೀಡಿತ್ತು.
ಭಾರತದ ಪರ ಓಪನರ್ಗಳಾಗಿ ನಾಯಕ ಸೂರ್ಯಕುಮಾರ್ ಮತ್ತು ಶುಭಮನ್ ಗಿಲ್ ಕ್ರೀಸ್ಗೆ ಆಗಮಿಸಿದರು. ಹಸರಂಗ ಎಸೆದ ಮೊದಲ ಎಸೆತವನ್ನು ಸೂರ್ಯಕುಮಾರ್ ಎಕ್ಸ್ಟ್ರಾ ಕವರ್ಗೆ ತಳ್ಳಿ ಮೂರು ರನ್ ಓಡುವ ಮೂಲಕ ಭಾರತ ಜಯ ಸಾಧಿಸಿತು.
ಟೈ ಆದ ಮ್ಯಾಚ್
ಕೊನೆಯ 2 ಓವರ್ಗಳಲ್ಲಿ ಶ್ರೀಲಂಕಾಕ್ಕೆ 23 ರನ್ ಬೇಕಿತ್ತು. ಅರ್ಶ್ದೀಪ್ 19ನೇ ಓವರ್ನಲ್ಲಿ 11 ರನ್ ನೀಡಿದರು. ಕೊನೆಯ ಓವರ್ನಲ್ಲಿ 12 ರನ್ ಬೇಕಿತ್ತು. ಹರ್ಷಿತ್ ರಾಣಾ ಎಸೆದ ಮೊದಲ ಓವರ್ನಲ್ಲಿ 107 ರನ್(58 ಎಸೆತ, 7 ಬೌಂಡರಿ, 6 ಸಿಕ್ಸ್) ಹೊಡೆದಿದ್ದ ಪಾತುಮ್ ನಿಸ್ಸಂಕ ವರುಣ್ ಚಕ್ರವರ್ತಿಗೆ ಕ್ಯಾಚ್ ನೀಡಿ ಔಟಾದರು. ಇದು ಪಂದ್ಯಕ್ಕೆ ರೋಚಕ ತಿರುವು ನೀಡಿತು. ನಂತರದ ಎಸೆತದಲ್ಲಿ 2, 1 ಬೈ, 2, 4 ರನ್ ಬಂತು. ಕೊನೆಯ ಓವರ್ನಲ್ಲಿ 3 ರನ್ ಬೇಕಿತ್ತು. ಶನಕ ಬೌಂಡರಿ ಹೊಡೆಯುವ ಪ್ರಯತ್ನ ನಡೆಸಿದರೂ 2 ರನ್ ಓಡಿದ ಪರಿಣಾಮ ಪಂದ್ಯ ಟೈನಲ್ಲಿ ಅಂತ್ಯವಾಯಿತು.
ಗೆಲ್ಲಲು 203 ರನ್ಗಳ ಕಠಿಣ ಸವಾಲನ್ನು ಪಡೆದ ಲಂಕಾ ಮೊದಲ ಓವರಿನಲ್ಲಿ ಕುಸಾಲ್ ಮೆಂಡಿಸ್ ಅವರ ವಿಕೆಟ್ ಕಳೆದುಕೊಂಡಿತ್ತು. ಎರಡನೇ ವಿಕೆಟಿಗೆ ಪಾತುಮ್ ನಿಸ್ಸಂಕ, ಕುಸಾಲ್ ಪೆರೆರಾ 70 ಎಸೆತಗಳಲ್ಲಿ 127 ರನ್ ಜೊತೆಯಾಟವಾಡಿ ಭದ್ರವಾದ ಇನ್ನಿಂಗ್ಸ್ ಕಟ್ಟಿದರು. ಕುಸಾಲ್ ಪೆರೆರಾ 58 ರನ್ (32 ಎಸೆತ, 8 ಬೌಂಡರಿ, 1 ಸಿಕ್ಸ್) ಗಳಿಸಿದ್ದಾಗ ಸ್ಟಂಪ್ ಔಟಾದರು. ನಂತರ ಬಂದ ನಾಯಕ ಚರಿತ್ ಅಸಲಂಕಾ ಸಿಕ್ಸ್ ಸಿಡಿಸಲು ಹೋಗಿ 5 ರನ್ ಗಳಿಸಿ ಕ್ಯಾಚ್ ನೀಡಿದರು. ಕಮಿಂಡು ಮೆಂಡಿಸ್ 3 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಈ ಪಂದ್ಯದಲ್ಲಿ ಬುಮ್ರಾ ಬದಲು ಅರ್ಶ್ದೀಪ್ ಸಿಂಗ್ ಅವರನ್ನು ಆಡಿಸಲಾಗಿತ್ತು. ಆದರೆ ಭಾರತದ ಬೌಲರ್ಗಳು ರನ್ ನಿಯಂತ್ರಣಕ್ಕೆ ಕಡಿವಾಣ ಹಾಕಲು ವಿಫಲರಾದರು. ಪಾಂಡ್ಯ ಕೇವಲ ಒಂದು ಓವರ್ ಎಸೆದು ಮೈದಾನ ತೊರೆದಿದ್ದು ಭಾರತಕ್ಕೆ ಹಿನ್ನಡೆ ಆಗಿತ್ತು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ಅಭಿಷೇಕ್ ಶರ್ಮಾ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ 202 ರನ್ ಗಳಿಸಿತ್ತು. ಶ್ರೀಲಂಕಾ ವಿರುದ್ಧದ ಇಂದಿನ ಪಂದ್ಯದಲ್ಲಿ ಅಭಿಷೇಕ್ ಶರ್ಮಾ 31 ಎಸೆತಗಳಲ್ಲಿ 61 ರನ್(8 ಬೌಂಡರಿ, 2 ಸಿಕ್ಸ್ ) ಸಿಡಿಸಿ ಔಟಾದರು. ತಿಲಕ್ ವರ್ಮಾ ಔಟಾಗದೆ 49 ರನ್(34 ಎಸೆತ, 4 ಬೌಂಡರಿ, 1 ಸಿಕ್ಸ್), ಸಂಜು ಸ್ಯಾಮ್ಸನ್ 39 ರನ್(23 ಎಸೆತ, 1 ಬೌಂಡರಿ, 3 ಸಿಕ್ಸ್), ಅಕ್ಷರ್ ಪಟೇಲ್ ಔಟಾಗದೆ 21 ರನ್(15 ಎಸೆತ, 1 ಬೌಂಡರಿ, 1 ಸಿಕ್ಸ್) ಹೊಡೆದರು.
























