ಪುತ್ತೂರು: ನವರಾತ್ರಿಯ ಸುಸಂದರ್ಭದಲ್ಲಿ ಶಾರದೋತ್ಸವ, ಭಜನೋತ್ಸವ, ಅಕ್ಷರಾಭ್ಯಾಸ, ಆಯುಧ ಪೂಜೆ ಮತ್ತು ವಾಹನ ಪೂಜೆಗಳ ಸಹಿತ ಅರ್ಥವತ್ತಾಗಿ ನಡೆದಾಗ ಜರುಗಿದ ಸನ್ಮಾನ ಕಾರ್ಯಕ್ರಮಕ್ಕೆ ನೂರಾರು ಜನರು ಸಾಕ್ಷಿಯಾದರು.
ಕಾರ್ಮಿಕರಿಗೆ ಸನ್ಮಾನ
ಈ ಸಂದರ್ಭದಲ್ಲಿ ಶಾಲಾಧ್ಯಕ್ಷ ಕಳುವಾಜೆ ವೆಂಕಟ್ರಮಣ ಗೌಡರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಎವಿಜಿ ಅಸೋಸಿಯೇಟ್ಸ್ ಸಂಸ್ಥೆಯ ಕಚೇರಿ ವ್ಯವಸ್ಥಾಪಕ ಚೇತನ್ ಕುಮಾರ್ ಮತ್ತು ಮರದ ಕೆಲಸಗಳ ಕೌಶಲ್ಯಮಯಿ ಉಮೇಶ್ ಇವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಯವರಾಗಿ ಮಾತನಾಡಿದ ರಾಜ್ಯ ಧಾರ್ಮಿಕ ಪರಿಷತ್ತಿನ ಮಾಜಿ ಸದಸ್ಯರಾದ ಮುರಳೀಕೃಷ್ಣ ಹಸಂತಡ್ಕ ಅವರು ಜ್ಞಾನದಾನ ಅತ್ಯಂತ ಶ್ರೇಷ್ಠವಾದುದು ಎಂದು ಪ್ರತಿಪಾದಿಸಿ ಅಂತಹ ಕೈಂಕರ್ಯ ಮಾಡುತ್ತಿರುವ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನ ಸೇವೆ ಶ್ರೇಷ್ಠವಾದುದು ಎಂದರು. ಧಾರ್ಮಿಕ ಮೌಲ್ಯಗಳನ್ನು ಕಾಪಾಡುವ ಚಿಂತನೆಯೊಂದಿಗೆ ಕಾರ್ಯಾಚರಿಸುತ್ತಿರುವ ಈ ಸಂಸ್ಥೆಯ ಕಾರ್ಯ ಸರ್ವತ್ರ ಶ್ಲಾಘನೀಯ ಎಂದು ಹೇಳಿದರು.
ಸಭಾಧ್ಯಕ್ಷರು ಮಾತನಾಡಿ ಧಾರ್ಮಿಕತೆ ಉಳಿಯಬೇಕಾದರೆ ಪ್ರತಿಯೋರ್ವರೂ ಕ್ರಿಯಾಶೀಲವಾಗಿ ಕಾರ್ಯೋನ್ಮುಖರಾಗಬೇಕು ಎಂದು ಅಭಿಪ್ರಾಯಪಟ್ಟರು.
ಶಾಲಾಡಳಿತ ಮಂಡಳಿಯ ಸಂಚಾಲಕ ಎ. ವಿ. ನಾರಾಯಣ, ಆಡಳಿತಾಧಿಕಾರಿ ಗುಡ್ಡಪ್ಪ ಗೌಡ ಬಲ್ಯ, ಉಪಾಧ್ಯಕ್ಷ ಉಮೇಶ್ ಮಳುವೇಲು, ನಿರ್ದೇಶಕರಾದ ಕೊರಗಪ್ಪ ಗೌಡ, ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಸೌಮ್ಯಾಶ್ರೀ ಹೆಗ್ಡೆ ಮತ್ತು ಮುಖ್ಯೋಪಾಧ್ಯಾಯರಾದ ಅಮರನಾಥ್ ಪಟ್ಟೆ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿರ್ದೇಶಕರಾದ ಶ್ರೀಮತಿ ಪುಷ್ಪಾವತಿ ಕಳುವಾಜೆ, ಶ್ರೀಮತಿ ಪ್ರತಿಭಾದೇವಿ ನಾರಾಯಣ ಮತ್ತು ಸೀತಾರಾಮ ಕೇವಳ, ಹಿರಿಯರಾದ ಗಂಗಯ್ಯ ಗೌಡ ತಾಳಿಪಡ್ಪು, ಪೋಷಕರು, ಆಹ್ವಾನಿತರು, ವಿದ್ಯಾರ್ಥಿಗಳು ಮತ್ತು ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು.
ಶಿಕ್ಷಕಿ ಶ್ವೇತಾ ಅವರ ನಿರೂಪಣೆಯೊಂದಿಗೆ ಮೂಡಿಬಂದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಜೋಸ್ತ್ನಾ ಮತ್ತು ಬಳಗ ಪ್ರಾರ್ಥನೆ, ಶಿಕ್ಷಕಿ ರಾಧಾ ಸ್ವಾಗತ, ಸಂಚಾಲಕ ಎ. ವಿ. ನಾರಾಯಣ ಪ್ರಸ್ತಾವನೆ ಮತ್ತು ಶಿಕ್ಷಕಿ ಹಿತಾಶ್ರೀ ವಂದನಾರ್ಪಣೆಗಳನ್ನು ನಿರ್ವಹಿಸಿದರು. ಹರೀಶ್ ಶಾಂತಿ ಇವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು.
























