ಆಪ್ ಕುರಿತು ಹಲವು ದೂರು; ಒಟಿಪಿ ಬರುವುದಿಲ್ಲ
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಜಾತಿ ಗಣತಿ ಸೆ.22ರಿಂದ ಆರಂಭವಾಗಿದ್ದರೂ ಮೊದಲ ಎರಡು ದಿನ ಪೂರ್ಣ ಪ್ರಮಾಣದಲ್ಲಿ ಸಮೀಕ್ಷೆ ನಡೆದಿಲ್ಲ. ಸಮೀಕ್ಷೆಗಾಗಿ ಅಭಿವೃದ್ಧಿಪಡಿಸಿದ ಆಪ್ ಓಪನ್ ಆಗದಿರುವುದು, ಓಪನ್ ಆದರೂ ಒಟಿಪಿ ಬರುತ್ತಿಲ್ಲ ಎಂಬ ದೂರುಗಳು ಕೇಳೀಬಂದಿವೆ. ಆಪ್ ಅಪ್ಡೇಟ್ ಕೇಳಿ ತಂತಾನೆ ಆಪ್ ಕ್ಲೋಸ್ ಆಗುತ್ತಿದೆ, ಸರ್ವೆ ಸಂಬಂಧಿಸಿದ ಯುಎಚ್ಐಡಿ ಸ್ಟಿಕ್ಕರ್ ಸರಿಯಾಗಿ ಅಂಟಿಸಿಲ್ಲ ಮುಂತಾದ ಸಮಸ್ಯೆಗಳನ್ನು ಸಿಬ್ಬಂದಿ ಎದುರಿಸುತ್ತಿದ್ದಾರೆ.
ಕೆಲವು ಕಡೆಗಳಲ್ಲಿ ಸರಿಯಾಗಿ ಲೊಕೇಷನ್ ತೋರಿಸದೇ ಎಲ್ಲೆಲ್ಲೋ ತೋರಿಸುತ್ತಿದೆ. ಒಂದು ಮನೆ ಅರ್ಜಿ ಭರ್ತಿ ಮಾಡಲು 2 ರಿಂದ 3 ಗಂಟೆ ತೆಗೆದುಕೊಳ್ಳುತ್ತಿದೆ. ನಾಲ್ಕೈದು ಬಾರಿ ಒಟಿಪಿ ತೆಗೆದುಕೊಳ್ಳುತ್ತದೆ. ಪದೇಪದೆ ಒಟಿಪಿ ಹೇಳಲು ಜನರು ಹಿಂದೇಟು ಹಾಕುತ್ತಿದ್ದಾರೆ. ಕೆಲವು ಮನೆಗಳಲ್ಲಿ ಸ್ಟಿಕ್ಕರ್ ಕಿತ್ತು ಹಾಕಿದ್ದಾರೆ. ಕೆಲವು ಮನೆಗಳಲ್ಲಿ ಬರಬೇಡಿ ಹೋಗಿ ಅಂತಾರೆ. ಇನ್ನು ಕೆಲವರು ಎಷ್ಟು ಸಮಯಬೇಕು ನಿಮಗೆ ಸಾಕು ಎದ್ದು ಹೋಗಿ ಎನ್ನುತ್ತಿದ್ದಾರೆಂದು ಸಮೀಕ್ಷೆ ಸಿಬ್ಬಂದಿ ಸಮಸ್ಯೆ ಹೇಳಿಕೊಂಡಿದ್ದಾರೆ. ಹಳ್ಳಿಗಳ ಜನರಿಗೆ ಇದು ಯಾವ ಗಣತಿ, ಯಾಕಾಗಿ ಮಾಡುತ್ತಿದ್ದಾರೆಂಬ ಸಮರ್ಪಕ ಮಾಹಿತಿಯೇ ಇಲ್ಲ.
ಕಷ್ಟಪಟ್ಟು ಅರ್ಜಿ ಭರ್ತಿ ಮಾಡಿದಾಗ ಕೊನೆ ಕ್ಷಣದಲ್ಲಿ ಸಬ್ಮಿಟ್ ತೆಗೆದುಕೊಳ್ಳುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದ್ರೂ ಯಾರೂ ಸೂಕ್ತ ಪರಿಹಾರ ಹೇಳುತ್ತಿಲ್ಲ. ಈ ಎಲ್ಲದರಿಂದ ನಾವೆಲ್ಲ ಗೊಂದಲಕ್ಕೀಡಾಗಿದ್ದೇವೆ. ಮೊದಲು ಸಮಸ್ಯೆ ಬಗೆಹರಿಸಿ, ನಂತರ ಕೆಲಸಕ್ಕೆ ಬರುತ್ತೇವೆ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ. ಮೂಡುಬಿದಿರೆಯಲ್ಲಿ ಸಮೀಕ್ಷೆ ಸಿಬ್ಬಂದಿ ಶಾಸಕರಿಗೆ ಸಮೀಕ್ಷೆ ಸಮರ್ಪಕ ನಡೆಯುತ್ತಿಲ್ಲ ಎಂದು ದೂರು ಕೊಟ್ಟಿದ್ದಾರೆ.
























