ವಿಮಾನದ ಚಕ್ರದ ನಡುವೆ ಅಡಗಿಕೊಂಡು ಅಫಘಾನಿಸ್ತಾನದಿಂದ ದಿಲ್ಲಿ ಗೆ ಬಂದ ಬಾಲಕ

13 ವರ್ಷದ ಬಾಲಕನ ಅಪಾಯಕಾರಿ ಸಾಹಸ ನೋಡಿ ಜಗತ್ತು ನಿಬ್ಬೆರಗು

ನವದೆಹಲಿ : 13 ವರ್ಷದ ಬಾಲಕನೊಬ್ಬ ಅಫ್ಘಾನಿಸ್ತಾನದ ಕಾಬೂಲ್‌ನಿಂದ ದೆಹಲಿ ತನಕ ವಿಮಾನದ ಚಕ್ರದ ಎಡೆಯಲ್ಲಿ ಕುಳಿತು ಬಂದಿರುವುದು ಅಚ್ಚರಿ ಹುಟ್ಟಿಸಿದೆ. ಬಾಲಕ ತನ್ನ ಜೀವವನ್ನೇ ಪಣಕ್ಕೊಡ್ಡಿ ವಿಮಾನದ ಹಿಂಬದಿ ಚಕ್ರದ ಭಾಗದಲ್ಲಿ 94 ನಿಮಿಷಗಳ ಕಾಲ ಪ್ರಯಾಣ ಮಾಡಿ ದಿಲ್ಲಿ ತಲುಪಿದ್ದಾನೆ. ಅಷ್ಟು ಎತ್ತರದಲ್ಲಿ ವಿಮಾನ ಹಾರುತ್ತಿರುವಾಗಲೂ ಈ ಬಾಲಕ ಯಾವುದೇ ಹಾನಿಯಾಗದೆ ಸುರಕ್ಷಿತವಾಗಿ ತಲುಪಿರುವುದು ಹೇಗೆ ಎಂಬುದು ಅಚ್ಚರಿ ಹುಟ್ಟಿಸಿದೆ.

ಬಾಲಕ ಇರಾನ್‌ಗೆ ಹೋಗಲುದ್ದೇಶಿಸಿದ್ದ, ಆದರೆ ತಪ್ಪಾಗಿ KAM ಏರ್ ಸಂಸ್ಥೆಯ ಏರ್‌ಬಸ್ A340 ವಿಮಾನ ಹತ್ತಿ ವಿಮಾನದ ಚಕ್ರದ ಜಾಗದಲ್ಲಿ ಅಡಗಿಕೊಂಡು ದೆಹಲಿಗೆ ಬಂದಿದ್ದಾನೆ. ವಿಮಾನ ಬೆಳಿಗ್ಗೆ 8.46ಕ್ಕೆ ಕಾಬೂಲ್‌ನ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು, 10.20ಕ್ಕೆ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಿತು.





















































 
 

ವಿಮಾನ ನಿಂತ ನಂತರ ಬಾಲಕ ನಿರ್ಬಂಧಿತ ವಲಯದಲ್ಲಿ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದ್ದು ಕೂಡಲೇ ವಿಮಾನ ನಿಲ್ದಾಣದ ಸಿಬ್ಬಂದಿ ಹಾಗೂ ಭದ್ರತಾ ಅಧಿಕಾರಿಗಳು ಎಚ್ಚರಗೊಂಡಿದ್ದಾರೆ. ಈ ಘಟನೆ ಕೇವಲ ಅಪರೂಪವಲ್ಲ, ಬಹುಮಟ್ಟಿಗೆ ಪವಾಡವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವಿಮಾನದ ಚಕ್ರದ ಹಿಂಭಾಗ ಸಾಮಾನ್ಯವಾಗಿ ಅತ್ಯಂತ ಅಪಾಯಕಾರಿ ಪ್ರದೇಶವಾಗಿದ್ದು, ಅಲ್ಲಿ ಆಮ್ಲಜನಕದ ಕೊರತೆ, ತೀವ್ರ ಚಳಿ ಹಾಗೂ ಹಾರಾಟದಿಂದ ಉಂಟಾಗುವ ಶಾರೀರಿಕ ಆಘಾತಗಳು ಜೀವಹಾನಿಗೆ ಕಾರಣವಾಗಬಹುದು.

ವಿಮಾನದ ಚಕ್ರದ ಭಾಗದಲ್ಲಿ ಕೆಲವು ಬಾರಿ ಒತ್ತಡ ನಿಯಂತ್ರಿತ ಜಾಗವಿರಬಹುದು. ಟೇಕ್‌ಆಫ್ ನಂತರ ಚಕ್ರದ ಬಾಗಿಲು ಮುಚ್ಚಿದರೆ, ಒಳಗೆ ತಾಪಮಾನವು ಪ್ರವಾಸಿಗರ ಕ್ಯಾಬಿನ್‌ಗೆ ಹತ್ತಿರವಾಗಿರಬಹುದು. ಇದೇ ಕಾರಣದಿಂದ ಬಾಲಕ ಜೀವ ಉಳಿಸಿಕೊಳ್ಳಲು ಸಾಧ್ಯವಾಗಿರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಈ ಸಾಹಸವನ್ನು ಪವಾಡವೆಂದು ಪರಿಗಣಿಸಬೇಕು, ಸಾಮಾನ್ಯವಾಗಿ ಇಂತಹ ಪ್ರಯತ್ನಗಳು ದುರಂತಕ್ಕೆ ಕಾರಣವಾಗುತ್ತವೆ ಎಂದು ವಾಯುಯಾನ ತಜ್ಞ ಕ್ಯಾಪ್ಟನ್ ಮೋಹನ್ ರಂಗನಾಥನ್ ಹೇಳಿದ್ದಾರೆ.

ಈ ಘಟನೆ ವಿಮಾನ ನಿಲ್ದಾಣಗಳ ಭದ್ರತೆ ಹಾಗೂ ಮಕ್ಕಳ ಪರಿಸ್ಥಿತಿಯನ್ನು ಚರ್ಚೆಗೆ ತರುವಂತಹದಾಗಿದೆ. ಬಾಲಕ ಏಕೆ, ಹೇಗೆ ಈ ನಿರ್ಧಾರ ತೆಗೆದುಕೊಂಡನು ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಿಲ್ಲ. ಆದರೆ ಇದು ನಿರಾಶೆಯ ಅಂಗಳದಲ್ಲಿದ್ದ ಒಂದು ಮಗುವಿನ ಬದುಕುಳಿಯುವ ಹೋರಾಟದ ಪ್ರತಿನಿಧಿ. ಮಾನವೀಯತೆ ಮತ್ತು ಭದ್ರತೆ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಇಂತಹ ಘಟನೆಯ ನಂತರ ಇನ್ನಷ್ಟು ಮುಖ್ಯವಾಗುತ್ತದೆ.

ದಿಲ್ಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಬಾಲಕನನ್ನು ಅದೇ ವಿಮಾನದಲ್ಲಿ ಬಾಲಕನನ್ನು ವಾಪಸು ಕಳುಹಿಸಿದ್ದಾರೆ. ವಿಚಾರಣೆ ಸಂದರ್ಭ ಆತ ತಾನು ಕುತೂಹಲದಿಂದ ಕಾಬೂಲ್‌ ವಿಮಾನ ನಿಲ್ದಾಣದ ನಿಷೇಧಿತ ಪ್ರದೇಶಕ್ಕೆ ನುಸುಳಿಕೊಂಡು ಹೋಗಿ ವಿಮಾನದ ಚಕ್ರದ ಮಧ್ಯೆ ಕುಳಿತಿದ್ದೆ ಎಂದು ಹೇಳಿಕೊಂಡಿದ್ದಾನೆ.

error: Content is protected !!
Scroll to Top