ಕರ್ನಾಟಕ ರಾಜ್ಯ ಸರಕಾರವು ಈಗಾಗಲೇ ಆಯೋಜಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ೨೦೨೫ ಇದೇ ತಿಂಗಳು ಸೆಪ್ಟೆಂಬರ್ ೨೨ ರಿಂದ ರಾಜ್ಯಾದ್ಯಂತ ಆರಂಭಗೊಳ್ಳಲಿದೆ. ಈ ಸಮೀಕ್ಷೆಗೆ ನಿಯೋಜಿತ ಅಧಿಕಾರಿಗಳು ಪ್ರತೀ ಮನೆಗೆ ಭೇಟಿ ನೀಡಿ ಸಮೀಕ್ಷೆ ಕಾರ್ಯವನ್ನು ಮಾಡಲಿದ್ದಾರೆ.
ಈಗಾಗಲೇ ಪ್ರತೀ ಮನೆಗೆ UID ಸಂಖ್ಯೆ ಅಂಟಿಸಲಾಗಿದ್ದು ದಾಖಲಾತಿ ಕೆಲಸ ಪ್ರಾರಂಭಗೊಂಡಿರುತ್ತದೆ. ಸಮೀಕ್ಷೆದಾರರು ಮನೆಗೆ ಬಂದಾಗ ಸಮಸ್ತ ಒಕ್ಕಲಿಗ ಸಮಾಜದವರು ಆದಿಚುಂಚನಗಿರಿ ಮಹಾಸಂಸ್ಥಾನದ ಪರಮ ಪೂಜ್ಯ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಡಾ| ನಿರ್ಮಲಾನಂದನಾಥ ಮಹಾಸ್ವಾಮೀಜಿಗಳ ನಿರ್ದೇಶನ ಮತ್ತು ಮಾರ್ಗದರ್ಶನದಂತೆ, ರಾಜ್ಯಒಕ್ಕಲಿಗರ ಸಂಘ (ರಿ.)ಬೆಂಗಳೂರು ಇವರ ಸೂಚನೆಯಂತೆ, ಒಕ್ಕಲಿಗ ಗೌಡ ಸೇವಾ ಸಂಘ (ರಿ.)ಕಡಬ ತಾಲೂಕು ಇದರ ಆಶಯದಂತೆ ಸಮೀಕ್ಷೆಯ ಜಾತಿ ಕಾಲಂನಲ್ಲಿ “ಒಕ್ಕಲಿಗ” ಎಂದು, ಉಪಜಾತಿ ಕಾಲಂನಲ್ಲಿ “ಗೌಡ” ಎಂದೂ, ಮಾತೃಭಾಷೆ ಕಾಲಂನಲ್ಲಿ ಪ್ರಾದೇಶಿಕ ಭಾಷೆಗಳಾದ ತುಳು/ಅರೆಭಾಷೆ/ಕನ್ನಡ ಇವುಗಳಲ್ಲಿ ನಿಮ್ಮ ಮಾತೃಭಾಷೆಯನ್ನು ನಮೂದಿಸಬೇಕು.
ಇದರ ಪೂರ್ವಭಾವಿಯಾಗಿ ಸಮೀಕ್ಷೆಯ ಅರ್ಜಿ ಫಾರಂನ್ನು ಮೊದಲೇ ಪ್ರಿಂಟ್ ತೆಗೆದು ಓದಿ ಎಲ್ಲಾ ವಿಷಯಗಳಿಗೂ ಸರಿಯಾದ ಮಾಹಿತಿಯನ್ನು ನಿರ್ಧರಿಸಿ ಕೊಡಬೇಕು. ಸಮೀಕ್ಷೆದಾರರು ನಿಮ್ಮ ಮನೆಗೆ ಬಂದಾಗ ಮನೆಯಲ್ಲಿ ಹಿರಿಯರು ಇಲ್ಲದೇ ಇದ್ದ ಸಂದರ್ಭದಲ್ಲಿ ಮನೆಯಲ್ಲಿ ಇರುವವರು ಸರಿಯಾದ ಮಾಹಿತಿಯನ್ನು ನೀಡಿ ಸಹಕರಿಸಬೇಕಾಗಿದೆ. ಆದುದರಿಂದ ಕಡಬ ತಾಲೂಕಿನ ಸಮಸ್ತ ಒಕ್ಕಲಿಗ ಸಮಾಜದ ಬಂಧುಗಳು ಈ ಸಮೀಕ್ಷೆಯಲ್ಲಿ ಪಾಲ್ಗೊಂಡು ಒಕ್ಕಲಿಗ ಸಮಾಜಕ್ಕೆ ಶಕ್ತಿಯನ್ನು ತುಂಬುವ ಕೆಲಸದಲ್ಲಿ ಕೈ ಜೋಡಿಸಬೇಕೆಂದು ಕಳಕಳಿಯ ಮನವಿಯನ್ನು ಮಾಡುತ್ತಿದ್ದೇವೆ ಎಂದು ಒಕ್ಕಲಿಗ ಗೌಡ ಸೇವಾ ಸಂಘ (ರಿ.) ಕಡಬ ತಾಲೂಕಿನ ಅಧ್ಯಕ್ಷರಾದ ಸುರೇಶ್ ಗೌಡ ಬೈಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
























