ಹೈಟೆನ್ಶನ್ ತಂತಿಗೆ ತಗುಲಿದ ಅಲ್ಯುಮಿನಿಯಂ ದೋಟಿ
ಸುಳ್ಯ: ತೆಂಗಿನಕಾಯಿ ಕೀಳುತ್ತಿದ್ದಾಗ ಅಲ್ಯೂಮಿನಿಯಂ ದೋಟಿ ವಿದ್ಯುತ್ ಲೈನ್ಗೆ ತಾಗಿ ಕಾಯಿ ಕೊಯ್ಯುತ್ತಿದ್ದ ವ್ಯಕ್ತಿ ಮೃತಪಟ್ಟ ಘಟನೆ ಸುಳ್ಯ ಸಮೀಪ ಬೆಳ್ಳಾರೆ ಬಳಿಯ ಅಯ್ಯನಕಟ್ಟೆಯಲ್ಲಿ ಸಂಭವಿಸಿದೆ.
ಮೃತರಾದ ವ್ಯಕ್ತಿ ತಂಬಿನಮಕ್ಕಿಯ ರಾಮ (47) ಎಂದು ತಿಳಿದು ಬಂದಿದೆ. ಅಯ್ಯನಕಟ್ಟೆಯ ಗೋಕುಲಂ ಎದುರುಗಡೆ ಇರುವ ಸಿದ್ದಿಕ್ ಎಂಬರಿಗೆ ಸೇರಿದ ತೆಂಗಿನಮರದಿಂದ ಕಾಯಿ ಕೀಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಾಮ ಅವರು ತೆಂಗಿನಕಾಯಿ ಕೊಯ್ಯುತ್ತಿದ್ದಾಗ ಅವರ ಕೈತಪ್ಪಿ ಅಲ್ಯುಮಿನಿಯಂ ದೋಟಿ ಪಕ್ಕದಲ್ಲಿ ಹಾದು ಹೋಗಿರುವ ಹೈಟೆನ್ಶನ್ ವಿದ್ಯುತ್ ತಂತಿಗೆ ತಾಗಿದೆ. ದೋಟಿಯ ಮೂಲಕ ವಿದ್ಯುತ್ ಹರಿದು ರಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು ಭೇಟಿ ನೀಡಿದ್ದಾರೆ.
























