ಸುಬ್ರಹ್ಮಣ್ಯ: ಆರೋಗ್ಯ ಸಮೃದ್ಧಿಗಾಗಿ ಯೋಗಾಸನವನ್ನು ಅನಾಧಿ ಕಾಲದಿಂದ ನಮ್ಮ ಪೂರ್ವಜರು ಪಾಲಿಸಿಕೊಂಡು ಬಂದಿದ್ದಾರೆ. ಎಳೆಯ ಪ್ರಾಯದಲ್ಲಿ ಮಕ್ಕಳಿಗೆ ಯೋಗಾಸನದ ಮಹತ್ವವನ್ನು ತಿಳಿಸಬೇಕು.ಇದರಿಂದ ಅವರು ಯೋಗದತ್ತ ಆಕರ್ಷಿತರಾಗಲು ಸಾಧ್ಯವಿದೆ. ಮಕ್ಕಳ ಆರೋಗ್ಯಪೂರ್ಣ ನಾಳೆಗಳಿಗೆ ಯೋಗ ದಾರಿದೀಪ ಎಂಬ ಸತ್ಯವನ್ನು ಅರಿತು ಪೋಷಕರು ಯೋಗಾಸನ ಮಾಡಲು ಮಕ್ಕಳಿಗೆ ಸ್ಪೂರ್ತಿ ನೀಡಬೇಕು ಎಂದು ಎಸ್.ಎಸ್.ಪಿ.ಯು ಕಾಲೇಜಿನ ಪ್ರಿನ್ಸಿಪಾಲ್ ಸೋಮಶೇಖರ್ ನಾಯಕ್ ಹೇಳಿದರು.
ಅವರು ಶುಕ್ರವಾರ ದ.ಕ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸುಳ್ಯ ಹಾಗೂ ಸುಬ್ರಹ್ಮಣ್ಯದ ಎಸ್.ಎಸ್.ಪಿ.ಯು ಕಾಲೇಜಿನ ಪ್ರೌಢಶಾಲಾ ವಿಭಾಗದ ಆಶ್ರಯದಲ್ಲಿ ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ಗುರುವಾರ ನಡೆದ ಕಡಬ ತಾಲೂಕು ಮಟ್ಟದ 14 ಹಾಗೂ 17 ರ ವಯೋಮಾನದ ಬಾಲಕ-ಬಾಲಕಿಯರ ಯೋಗಾಸನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಯೋಗಾಸನವು ಭಾರತೀಯ ಸಂಸ್ಕೃತಿಯ ಪರಂಪರೆಯ ಪ್ರತೀಕವಾಗಿ ಜಗದಗಲಕ್ಕೆ ವ್ಯಾಪಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಇದೀಗ ದೇಶ ಮಾತ್ರವಲ್ಲದೆ ವಿದೇಶಗಳಲ್ಲೂ ಯೋಗವನ್ನು ಅನುಸರಿಸುತ್ತಿದ್ದಾರೆ ಎಂದರು.
ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತಾ ಕಲ್ಲಾಜೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸೂಫಿ ಪೆರಾಜೆ, ಸುಬ್ರಹ್ಮಣ್ಯ ಸರಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಮಾಧವ ಮೂಕಮಲೆ, ಪ್ರಾಥಮಿಕ ಶಾಲಾ ಎಸ್.ಡಿಎಂಸಿ ಅಧ್ಯಕ್ಷ ಶೇಷಕುಮಾರ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಪ್ರೌಢಶಾಲಾ ಮುಖ್ಯ ಶಿಕ್ಷಕಿ ನಂದಾ ಹರೀಶ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ರಾಮಕೃಷ್ಣ ಹೊಳ್ಳಾರು, ಹಿರಿಯ ಸಹಶಿಕ್ಷಕ ಎಂ.ಕೃಷ್ಣ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕ ಸುರೇಶ್ ವಂದಿಸಿದರು. ಅಧ್ಯಾಪಕರಾದ ಸತೀಶ್, ಸ್ಮಿತಾ, ಚೇತಾಕ್ಷಿ ಸಹಕರಿಸಿದರು.
























