ಪುತ್ತೂರು: ತುಳು ಭಾಷೆಯ ಉಳಿವಿಗೆ ಮಕ್ಕಳಿಗೆ ತುಳು ಕಲಿಸುವ ಪ್ರಯತ್ನ ಆಗಬೇಕು. ಪಾಶ್ಚಾತ್ಯ ದೇಶದವರಾದರೂ ಆಗಸ್ಟ್ ಮ್ಯಾನರ್, ಕಿಟ್ಟೆಲ್, ಕ್ರ್ಯಾಮರ್ ಮೊದಲಾದವರು ತುಳುವಿಗಾಗಿ ಶ್ರಮಿಸಿದ ರೀತಿ ಅಮೋಘ. ಆ ಸಾಧನೆ ನಮ್ಮ ಮಕ್ಕಳಿಂದ ಆಗಬೇಕು ಎಂದು ರೆ ವಿಜಯ್ ಹಾರ್ವಿನ್ ಅಭಿಪ್ರಾಯಪಟ್ಟರು.
ತುಳು ಭಾಷೆಯ ಉಳಿವಿಗಾಗಿ, ತುಳುವಿನ ಅಸ್ಮಿತೆಗಾಗಿ ಹುಟ್ಟಿಕೊಂಡ ತುಳು ಅಪ್ಪೆಕೂಟ ಪುತ್ತೂರು ಮೂರನೇ ವರ್ಷಕ್ಕೆ ಪಾದಾರ್ಪಣೆ ಗೈಯುತ್ತಿರುವ ಸಂದರ್ಭದಲ್ಲಿ ಪುತ್ತೂರಿನ ಸುದಾನ ವಸತಿಯುತ ಶಾಲೆಯ ಸುದಾನ ಲಹರಿ ಸಾಹಿತ್ಯ ಸಂಘದ ಸಹಭಾಗಿತ್ವದೊಂದಿಗೆ ಎಡ್ವರ್ಡ್ ಸಭಾಂಗಣದಲ್ಲಿ ನಡೆದ ಪದಗ್ರಹಣ ಸಮಾರಂಭ ಮತ್ತು ತುಳು ಲಿಪಿ ಕಾರ್ಯಾಗಾರವನ್ನು ಸುದಾನ ಶಾಲೆಯ ಸಂಚಾಲಕರಾದ ರೆ. ವಿಜಯ ಹಾರ್ವಿನ್ ಶನಿವಾರ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ತುಳು ಅಪ್ಪೆ ಕೂಟದ ಅಧ್ಯಕ್ಷೆ ಹರಿಣಾಕ್ಷಿ ಜೆ ಶೆಟ್ಟಿ ಮಾತನಾಡಿ, ತುಳು ಅಪ್ಪೆ ಕೂಟವು ಪ್ರಪಂಚದ ಪ್ರಥಮ ಮಹಿಳಾ ತುಳುಕೂಟವಾಗಿದ್ದು, ಇದರಿಂದ ತುಳು ಉಳಿಸುವ ನಿರಂತರ ಪ್ರಯತ್ನ ನಡೆಯುತ್ತಿದ್ದು, ತುಳು ಕವಿಗೋಷ್ಠಿ, ತಾಳಮದ್ದಳೆ ಕಾರ್ಯಕ್ರಮಗಳು ನಿರಂತರ ನಡೆಯುತ್ತಿದೆ ಎಂದು ಹೇಳಿದರು.
ವೇದಿಕೆಯಲ್ಲಿ ತುಳು ಅಪ್ಪೆಕೂಟದ ಕಾರ್ಯದರ್ಶಿ ಭಾರತಿ ರೈ ಕೌಡಿಚ್ಚಾರು, ಗೌರವಾಧ್ಯಕ್ಷರಾದ ಪ್ರೇಮಲತಾ ರಾವ್, ಸುದಾನ ಶಾಲೆಯ ಉಪ ಮುಖ್ಯ ಶಿಕ್ಷಕಿ ಲವೀನಾ ನವೀನ್ ಹನ್ಸ್, ಲಹರಿ ಸಾಹಿತ್ಯ ಸಂಘದ ನಿರ್ದೇಶಕಿ ಅನಿತಾ, ಶಿಕ್ಷಕಿ ಹಾಗೂ ಅಪ್ಪೆಕೂಟದ ಗೌರವ ಸಲಹೆಗಾರರಾದ ಕವಿತಾ ಅಡೂರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜೊತೆ ಕಾರ್ಯದರ್ಶಿ ಶಾರದಾ ಕೇಶವ್, ಕೋಶಾಧಿಕಾರಿ ವಸಂತಲಕ್ಷ್ಮೀ ಪುತ್ತೂರು, ಸಾಂಸ್ಕೃತಿಕ ಸಂಚಾಲಕರಾದ ಸ್ಮಿತಾ ಹನಿಯೂರು ಪಾಲ್ಗೊಂಡರು.
ತುಳು ಅಪ್ಪೆಕೂಟದ ಸಂಚಾಲಕಿ ಶ್ರೀಶಾವಾಸವಿ ತುಳುನಾಡ್ ಕಾರ್ಯಕ್ರಮ ನಿರೂಪಿಸಿ, ಮಕ್ಕಳಿಗೆ ತುಳು ಲಿಪಿ ಕಾರ್ಯಾಗಾರ ನಡೆಸಿಕೊಟ್ಟರು. ಕವಿತಾ ಅಡೂರು ಸ್ವಾಗತಿಸಿ, ಭಾರತಿ ರೈ ಕೌಡಿಚ್ಚಾರು ವಂದಿಸಿದರು. ತುಳು ಅಪ್ಪೆಕೂಟದ ವತಿಯಿಂದ ವಿಜಯ್ ಹಾರ್ವಿನ್ ಅವರನ್ನು ಸನ್ಮಾನಿಸಲಾಯಿತು.
























