ದೂರು ಹಿಂಪಡೆಯುತ್ತೇನೆ ಎಂದು ಗೋಗರೆದ ಸುಜಾತಾ ಭಟ್
ಧರ್ಮಸ್ಥಳ : ನೂರಾರು ಶವಗಳನ್ನು ಹೂತಿಟ್ಟಿರುವುದಾಗಿ ಬುರುಡೆ ಬಿಟ್ಟ ಮಾಸ್ಕ್ ಮ್ಯಾನ್ ಚಿನ್ನಯ್ಯನ ವಿರುದ್ಧ ವಿಶೇಷ ತನಿಖಾ ತಂಡ ಹೊಸ ಸೆಕ್ಷನ್ಗಳನ್ನು ಹಾಕಿದೆ.
ಇದರ ಪ್ರಕಾರ ಬುರುಡೆ ಪ್ರಕರಣದಲ್ಲಿ ಚಿನ್ನಯ್ಯನೇ ಎ-1 ಆಗಿದ್ದಾನೆ. ಇದು ಪಿತೂರಿಯಲ್ಲದೆ ಮತ್ತೋನೂ ಅಲ್ಲ, ಸುಳ್ಳು ಮಾಹಿತಿಯನ್ನು ಕೊಟ್ಟಿದ್ದರಿಂದ ಆತನನ್ನು ಬಂಧಿಸಲಾಗಿದೆ ಎಂದು ಕೋರ್ಟಿಗೆ ಎಸ್ಐಟಿ ಮಾಹಿತಿ ಕೊಟ್ಟಿದೆ. ಇದು ಕಪೋಲಕಲ್ಪಿತ ಷಡ್ಯಂತ್ರ ಅಂತಲೂ ಹೇಳಿರುವ ಎಸ್ಐಟಿ ಬಿಎನ್ಎಸ್ ಸೆಕ್ಷನ್ 336, 227 ರಿಂದ 238ರ ಅಡಿ ಎಫ್ಐಆರ್ (FIR) ದಾಖಲಿಸಿದೆ.
ಎಸ್ಐಟಿ ತನಿಖೆಗೆ ಹೋಗಿ ಬರಲು ಚಿನ್ನಯ್ಯ ಬಳಸ್ತಿದ್ದ ಬಿಳಿ ಕಾರಿನ ಮಾಲೀಕನಿಗೂ ನೋಟಿಸ್ ಕೊಟ್ಟು ವಿಚಾರಣೆಗೆ ಕರೆಯುವ ಸಾಧ್ಯತೆಯಿದೆ. ತಿಮರೋಡಿ ಮನೆಯಲ್ಲಿದ್ದ ಮೂರು ತಲ್ವಾರ್, ಸಿಸಿಟಿವಿ ಹಾರ್ಡ್ ಡಿಸ್ಕ್, ಮಹೇಶ್ ಶೆಟ್ಟಿ ಹೆಂಡತಿ ಮತ್ತು ಇಬ್ಬರು ಮಕ್ಕಳ ಮೊಬೈಲ್ ಫೋನ್ಗಳನ್ನು ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸಹೋದರ ಮೋಹನ್ ಶೆಟ್ಟಿ ಮನೆಯಿಂದ ಲ್ಯಾಪ್ಟಾಪ್, ಹಾರ್ಡ್ ಡಿಸ್ಕ್, ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.
ಕೇಸ್ ಹಿಂಪಡೆಯುತ್ತೇನೆ ಎಂದ ಸುಜಾತಾ ಭಟ್
ಬುಧವಾರವೂ ಸುಜಾತಾ ಭಟ್ ಅವರನ್ನು ಎಸ್ಐಟಿ ತೀವ್ರ ವಿಚಾರಣೆಗೊಳಪಡಿಸಿದೆ. ಹೊರಗಡೆ ಊಟಕ್ಕೂ ಬಿಡದೆ ತೀವ್ರ ವಿಚಾರಣೆ ನಡೆಸಿದ್ದು, ಅಧಿಕಾರಿಗಳ ಪ್ರಶ್ನೆಗಳ ಸುರಿಮಳೆಗೆ ಸುಜಾತಾ ಭಟ್ ತಪ್ಪಾಯ್ತು ನನ್ನನ್ನು ಬಿಟ್ಟುಬಿಡಿ. ದೂರು ವಾಪಸ್ ಪಡೆದುಕೊಳ್ಳುತ್ತೇನೆ ಎಂದು ಕಣ್ಣೀರಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಎರಡನೇ ದಿನದ ವಿಚಾರಣೆ ವೇಳೆ ಎಸ್ಐಟಿ ಅಧಿಕಾರಿಗಳ ಪ್ರಶ್ನೆಗಳ ಸುರಿಮಳೆಗೆ ಸುಜಾತಾ ಭಟ್ ಉತ್ತರಿಸಲಾಗದೆ ಕಕ್ಕಾಬಿಕ್ಕಿಯಾಗಿದ್ದು, ತಪ್ಪಾಯಿತು ನನ್ನನ್ನು ಬಿಟ್ಟು ಬಿಡಿ ಎಂದು ಕಣ್ಣೀರಿಟ್ಟಿದ್ದಾರೆ. ಅಲ್ಲದೇ ಅನನ್ಯ ಭಟ್ ನಾಪತ್ತೆ ಪ್ರಕರಣ ಸಂಬಂಧ ಎಸ್ಐಟಿ ಅಧಿಕಾರಿಗಳಿಗೆ ನೀಡಿರುವ ದೂರನ್ನ ವಾಪಸ್ ಪಡೆಯುವುದಾಗಿ ಸುಜಾತಾ ಭಟ್ ಎಸ್ಐಟಿ ಅಧಿಕಾರಿಗಳ ಮುಂದೆ ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅನನ್ಯ ಭಟ್ ಪ್ರಕರಣದ ರಹಸ್ಯ ಹಾಗೂ ಅದರ ಹಿಂದಿರುವವರ ಹೆಸರುಗಳನ್ನು ಸುಜಾತಾ ಭಟ್ ಬಾಯಿಬಿಟ್ಟಿದ್ದಾರೆ ಎನ್ನಲಾಗಿದೆ.
























