ಹಾಸನ: ಯಾರು ಏನು ಬೇಕಾದರೂ ಮಾತನಾಡಲಿ, ನಾನು ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ವೇದಿಕೆಯಲ್ಲಿ ಮಾತನಾಡುತ್ತೇನೆ ಎಂದು ದಸರಾ ಉದ್ಘಾಟನೆಗೆ ಸಂಬಂಧಿಸಿದ ಹಾಗೆ ಎದ್ದಿರುವ ಗೊಂದಲಗಳಿಗೆ ಪ್ರತಿಷ್ಟಿತ ಬುಕರ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಾನು ಮುಷ್ತಾಕ್ ತಿಳಿಸಿದ್ದಾರೆ.
ಮೈಸೂರು ದಸರಾ ಉದ್ಘಾಟನೆಗೆ ತಮ್ಮನ್ನು ಆಮಂತ್ರಿಸಿರುವ ಬಗ್ಗೆ ಎದ್ದಿರುವ ವಿರೋಧಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು ನಾನು ಈ ಹಿಂದೆ ಏನು ಮಾತನಾಡಿದ್ದೇನೆ ಎನ್ನುವುದನ್ನು ತಿಳಿದುಕೊಂಡು ಮಾತನಾಡಲಿ. ಯಾರದ್ದೋ ವಿರೋಧಕ್ಕೆ ನಾನು ಪ್ರತಿಕ್ರಿಯೆ ನೀಡುವ ಅಗತ್ಯ ಇಲ್ಲ. ಮಾತನಾಡುವವರು ಮಾತನಾಡಲಿ. ಅದು ಅವರ ವಾಕ್ ಸ್ವಾತಂತ್ರ್ಯ. ಅವುಗಳಿಗೆಲ್ಲಾ ನಾನು ಸೂಕ್ತ ವೇದಿಕೆಯಲ್ಲೇ ಉತ್ತರ ನೀಡುವುದಾಗಿ ಹೇಳಿದ್ದಾರೆ.
ದಸರಾ ಉದ್ಘಾಟನೆಗೆ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಸಂತಸವಿದೆ. ನೀವು ಚಾಮುಂಡೇಶ್ವರಿ ತಾಯಿ ಎನ್ನುತ್ತೀರಿ. ನಾನು ಆ ಭಾವನೆಯನ್ನು ಗೌರವಿಸುತ್ತೇನೆ. ನೀವು ದಸರಾವನ್ನು ನಾಡ ಹಬ್ಬ ಎನ್ನುತ್ತೀರಿ. ನಾನು ಅದನ್ನೂ ಗೌರವಿಸುತ್ತೇನೆ ಎಂದು ನುಡಿದಿದ್ದಾರೆ.
























