ಪುತ್ತೂರು: ನಮ್ಮಲ್ಲಿರುವ ಭಾವನೆಗಳನ್ನು ಜಾಗೃತವಾಗಿಡಲು ಆಧ್ಯಾತ್ಮಿಕ ಜ್ಞಾನ ಸಹಕಾರಿ. ಕಣ್ಣು, ಕಿವಿ ಮುಂತಾದ ಪಂಚೇಂದ್ರಿಯಗಳಿಗೆ ಅದರದ್ದೇ ಆದ ಮಹತ್ವ ಇದೆ. ಅದರ ಸಮರ್ಥ ಬಳಕೆಯಿಂದ ನಾವು ಪ್ರತಿ ವಿಚಾರಗಳ ಬಗ್ಗೆ ವಿಮರ್ಶೆ ಮಾಡಿ ಮುಂದುವರಿಯಬೇಕು ಎಂದು ಮೈಸೂರು ಅಂಭ್ರಣೀ ಗುರುಕುಲದ ನಿರ್ದೇಶಕ ಡಾ. ಬೆ.ನಾ ವಿಜಯೀಂದ್ರ ಆಚಾರ್ಯ ನುಡಿದರು.
ಅವರು ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ(ಸ್ವಾಯತ್ತ) ಇಲ್ಲಿನ ಸಂಸ್ಕೃತ ಸಂಘದ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಮತ್ತು ಸಂಸ್ಕೃತ ಸಂಘ, ವಿವೇಕಾನಂದ ಸಂಶೋಧನಾ ಕೇಂದ್ರ, ಸೌರಭ ಪ್ರಸಾರಾಂಗ ಹಾಗೂ ಐಕ್ಯೂಎಸಿಯ ಸಹಯೋಗದಲ್ಲಿ ನಡೆದ ’ಭಾರತಿಯ ಜೀವನ ದರ್ಶನ’ ಪ್ರವಚನ ಮಾಲಿಕೆಯನ್ನು ಉದ್ಘಾಟಿಸಿ ಮಾತನಾಡಿದರು.
ಭಾರತದಲ್ಲಿ ಜನ್ಮ ಪಡೆದಾಗ ಸ್ವರ್ಗ ಪ್ರಾಪ್ತಿಯ ಫಲ ಎಂಬುದು ನಂಬಿಕೆ. ಸಂಕಷ್ಟದ ಸಂದರ್ಭ ಅದನ್ನು ಪರಿಹರಿಸಿ ಮೇಲೇಳುವ ದೇಶ ಇದು. ಹೀಗಿರುವ ದೇಶದಲ್ಲಿ ಯುವ ಸಮಾಜ ಧರ್ಮ ಸಂರಕ್ಷಣೆಯ ಕಾರ್ಯದಲ್ಲಿ ತೊಡಗಬೇಕು ಎಂದರು.
ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಅಧ್ಯಕ್ಷತೆ ವಹಿಸಿ ಮಾತನಾಡಿ, ತರಗತಿಯಲ್ಲಿ ಪಡೆದುಕೊಂಡ ಜ್ಞಾನವೂ ಅತೀ ಮುಖ್ಯವಾಗಿರುತ್ತದೆ. ಇದರ ಜೊತೆಗೆ ಹಿರಿಯರು ಹೇಳಿದ ಮಾತುಗಳನ್ನು ಬದುಕಿನಲ್ಲಿ ಅಗತ್ಯವಾಗಿ ಅಳವಡಿಸಿಕೊಳ್ಳಬೇಕು ಎಂದರು.
ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ ಕೆ.ಎನ್ ಶುಭಹಾರೈಸಿದರು. ಈ ಸಂದರ್ಭದಲ್ಲಿ ಡಾ. ಬೆ.ನಾ ವಿಜಯೀಂದ್ರ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಸಂಸ್ಕೃತ ಸಂಘದ ಲಾಂಛನವನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯೆ ಶುಭಾ ಅಡಿಗ, ಪ್ರಿನ್ಸಿಪಾಲ್ ಡಾ. ಶ್ರೀಧರ ನಾಯಕ್ ಉಪಸ್ಥಿತರಿದ್ದರು. ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಶ್ರೀಶ ಕುಮಾರ ಯಂ.ಕೆ ಸ್ವಾಗತಿಸಿ, ಸಂಸ್ಕೃತ ಸಂಘದ ಅಧ್ಯಕ್ಷೆ ಪ್ರಣತಿ.ಕೆ ವಂದಿಸಿದರು. ಜೊತೆ ಕಾರ್ಯದರ್ಶಿ ಅನರ್ಘ್ಯಾ.ಜಿ ನಿರೂಪಿಸಿದರು.
























