ದಲಿತ ಸಮುದಾಯದ ಕಲಾವಿದನಿಗೆ ತೇಜೋವಧೆ ಮಾಡುವವರ ವಿರುದ್ಧ ಪ್ರತಿಭಟನೆ- ಪತ್ರಿಕಾಗೋಷ್ಟಿಯಲ್ಲಿ ಎಚ್ಚರಿಕೆ ನೀಡಿದ ದಲಿತ ಸಂಘಟನೆ.

ಪುತ್ತೂರು: ರವಿ ರಾಮಕುಂಜ ಅವರು ನಮ್ಮ ದಲಿತ ಸಮುದಾಯಕ್ಕೆ ಸೇರಿದ ಹುಡುಗನಾಗಿದ್ದು, ಆತನ ಬೆಳವಣಿಗೆಯನ್ನು ಕುಂಠಿತಗೊಳಿಸುವ ನಿಟ್ಟಿನಲ್ಲಿ ತೇಜೋವಧೆ ಮತ್ತು ಷಡ್ಯಂತ್ರ ನಡೆಯುತ್ತಿದೆ. ಇದನ್ನು ಮುಂದುವರಿಸಿದಲ್ಲಿ ತೇಜೋವಧೆ ಮಾಡುತ್ತಿರುವವರ ವಿರುದ್ಧ ದಲಿತ ಸಂಘಟನೆ ಪ್ರತಿಭಟನೆ ನಡೆಸಲಿದೆ ಎಂದು ಅಂಬೇಡ್ಕ‌ರ್ ಆಪದ್ಭಾಂಧವ ಸಂಘಟನೆಯ ಜಿಲ್ಲಾಧ್ಯಕ್ಷ ರಾಜು ಹೊಸ್ಮಠ ಹೇಳಿದ್ದಾರೆ.

ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಂಗಳೂರು ಪಂಚನಾಡಿಯಲ್ಲಿ ನಡೆದ ಹಾಸ್ಯ ಪ್ರಹಸನ ಕಾರ್ಯಕ್ರಮದಲ್ಲಿ ರವಿ ರಾಮಕುಂಜ ಅವರು ಮಾಡಿದ ಪಾತ್ರದಲ್ಲಿ ಶ್ರೀ ಕೃಷ್ಣ ದೇವರಿಗೆ ಅವಮಾನ ಆಗಿದೆ ಎಂದು ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಹರಿಪ್ರಸಾದ್ ರೈ ನೆಲ್ಲಿಕಟ್ಟೆ ಅವರು ದೂರು ನೀಡಿದ್ದರು. ಈ ವಿಚಾರದಲ್ಲಿ ರವಿ ರಾಮಕುಂಜ ಅವರು ಠಾಣೆಗೆ ಹಾಜರಾಗಿ ಮುಂದೆ ಹಿಂದೂ ಬಾಂಧವರ ಭಾವನೆಗೆ ಧಕ್ಕೆ ಬರುವಂತಹ ಸಂಭಾಷಣೆಯನ್ನು ಪ್ರದರ್ಶಿಸುವುದಿಲ್ಲ ಎಂದು ಮುಚ್ಚಳಿಕೆ ಪತ್ರ ಬರೆದುಕೊಟ್ಟಿದ್ದಾರೆ. ಠಾಣೆಯಲ್ಲಿ ಈ ವಿಚಾರ ಮುಗಿದ ಬಳಿಕವೂ ಇದೀಗ ವಾಟ್ಸಪ್, ಫೇಸ್‌ಬುಕ್ ಇನ್ನಿತರ ಮಾಧ್ಯಮಗಳಲ್ಲಿ ರವಿ ರಾಮಕುಂಜ ಅವರ ಹೆಸರನ್ನು ಹಾಕಿ ಅವರ ತೇಜೋವಧೆ ಮಾಡಲಾಗುತ್ತಿದೆ. ಹರಿಪ್ರಸಾದ್ ನೆಲ್ಲಿಕಟ್ಟೆ ಮತ್ತು ಬಾಲಚಂದ್ರ ಸೊರಕೆ ಅವರು ಬೇರೆ ಬೇರೆ ಹಿಂದು ಸಂಘಟನೆಗಳಿಗೆ ಪ್ರಚೋದನೆ ನೀಡಿ ಆ ವಿಷಯವನ್ನು ಎತ್ತಿಕೊಂಡು ಸಂಘರ್ಷಕ್ಕೆ ದಾರಿ ಮಾಡುತ್ತಿದ್ದಾರೆ. ಇತ್ತೀಚೆಗೆ ವಿಶ್ವಹಿಂದು ಪರಿಷತ್‌ ವತಿಯಿಂದಲೂ ಠಾಣೆಗೆ ದೂರು ನೀಡಲಾಗಿದೆ. ಮುಂದಿನ ದಿನ ರವಿ ರಾಮಕುಂಜ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಅವಮಾನಿಸಿದರೆ, ತೇಜೋವಧೆ ನಡೆಸಿದರೆ ದಲಿತ ಸಂಘಟನೆಗಳು ಎಚ್ಚೆತ್ತುಕೊಂಡು ಪ್ರತಿಭಟನೆ ಮಾಡಬೇಕಾದಿತು ಎಂದು ಎಚ್ಚರಿಕೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ಸೋಮನಾಥ ಉಪ್ಪಿನಂಗಡಿ, ಆಪತ್ಪಾಂಧವ ಸಂಘಟನೆಯ ಶಾಂತಪ್ಪ ನರಿಮೊಗರು, ಆನಂದ ಅಲೀರ, ಶಿವಪ್ಪ ದೋಳಾಡಿ ಉಪಸ್ಥಿತರಿದ್ದರು.





















































 
 
error: Content is protected !!
Scroll to Top