ಗಣೇಶೋತ್ಸವ, ಈದ್ ಮಿಲಾದ್ ಹಿನ್ನಲೆ : ಶಾಂತಿ ಸಭೆ

ಪುತ್ತೂರು: ಹಿಂದಿನಿಂದಲೂ ಆಚರಣೆ ಮಾಡಿಕೊಂಡು ಬಂದಂತೆ ಪಾರಂಪರಿಕ, ಸಾಂಪ್ರಾದಾಯಿಕ ಆಚರಣೆಗಳಿಗೆ ಯಾವುದೇ ಆಕ್ಷೇಪ ಇರುವುದಿಲ್ಲ ಎಂದು ದ.ಕ. ಜಿಲ್ಲಾ ಎಡಿಶನಲ್ ಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ ಹೇಳಿದರು.

ಅವರು ಶನಿವಾರ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬಗಳ ಹಿನ್ನಲೆಯಲ್ಲಿ ನಗರದ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಗುರುವಾರ ನಡೆದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯ ಜನತೆ ಮುಕ್ತ ಮನಸ್ಥಿತಿಯವರು ಹಾಗೂ ಸೌಹಾರ್ದತೆಯನ್ನು ಕಾಪಾಡುವವರು ಎಂಬುದು ಇಲ್ಲಿನವರ ಮಾತಿನಲ್ಲಿ ಕಾಣುತ್ತಿದೆ. ಕಳೆದ ಮೂರು ವರ್ಷಗಳಿಂದ ಈದ್ ಹಾಗೂ ಚೌತಿ ಕೆಲವು ದಿನಗಳ ಅಂತರದಲ್ಲೇ ಬರುತ್ತಿರುವುದು ದೇವರ ಶುಭ ಸಂಕೇತ ಎಂದು ಭಾವಿಸಬೇಕು. ಕೆಲವು ನಿಬಂಧನೆ ಯಾಕೆ ಎಂದರೆ ಸಮಾಜದ ಎಲ್ಲರೂ ಸೌಹಾರ್ದವಾಗಿ ಆಚರಣೆ ಆಗಬೇಕು. ಗೋಡೆ ಹಾಕಲು ನಾಮಗೂ ಇಷ್ಟ ಇಲ್ಲ. ಕೆಲವು ಜನ ಕಿಡಿಗೇಡಿಗಳಿಂದ ಎಲ್ಲರಿಗೂ ಸಮಸ್ಯೆ ಆಗುತ್ತದೆ. ನೀವು ಮಫ್ತಿಯಲ್ಲಿ ಸಂಭ್ರಮಿಸಿದರೆ ನಾವು ಸಮವಸ್ತ್ರದಲ್ಲಿ ಹಬ್ಬಗಳ ಸಂಭ್ರಮ ಪಡುತ್ತೇವೆ ಎಂದು ಹೇಳಿದರು.





















































 
 

ಸಾರ್ವಜನಿಕ ಹಬ್ಬಗಳ ಆಚರಣೆಯ ಸಂದರ್ಭ ಕಿರಿ ಕಿರಿ ಮಾಡುವವರು ಕಂಡರೆ ನೀವೇ ಅವರನ್ನು ತಹಬಂದಿಗೆ ತನ್ನಿ. ಕೈ ಮೀರುವ ಸಂದರ್ಭ ಇದ್ದರೆ ಪೊಲೀಸ್ ಇಲಾಖೆಯವರ ಗಮನಕ್ಕೆ ತನ್ನಿ.

ಕಾನೂನು ಪ್ರಕಾರ ೬ ರಿಂದ ೧೦ ಗಂಟೆಗೆ ಪಾಲನೆ ಅಗತ್ಯವಿದೆ. ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಸರ್ವೋಚ್ಚ ನ್ಯಾಯಾಲಯದ ಆದೇಶವಿದೆ. ಅದಕ್ಕೆ ಮೀರಿ ಅವಕಾಶ ಇಲ್ಲ. ಒಳಗಡೆ ಭಜನೆಯಂಹ ಆಚರಣೆಗಳಿಗೆ ಅಡ್ಡಿ ಇಲ್ಲ. ಆದಷ್ಟು ಬೇಗ ಮುಗಿಸಿದರೆ ಎಲ್ಲರಿಗೂ ಒಳ್ಳೆಯದು. ದುಷ್ಟ ಶಕ್ತಿಗಳಿಂದ ನಡೆಯುವ ಅಪಾಯವೂ ಕಡಿಮೆಯಾಗುತ್ತದೆ ಎಂದು ಅನಿಲ್ ಕುಮಾರ್ ಹೇಳಿದರು.

ಎಸ್ಡಿಪಿಐ ಮುಖಂಡ ಅಬೂಬಕ್ಕರ್ ಸಿದ್ದಿಕ್ ಮಾತನಾಡಿ, ಈದ್ ಮಿಲಾದ್ ಆಚರಣೆ ದಿನ ನಿಗದಿ ಆಗಿಲ್ಲ. ಅಂದು ಕಾಲ್ನಡಿಗೆ ಜಾಥಾ ಬೆಳಗ್ಗೆ ೧೦ ಗಂಟೆ ಒಳಗೆ ಮುಗಿಯುತ್ತದೆ. ಈದ್ ಮಿಲಾದ್ ರ್ಯಾಲಿ ಮಧ್ಯಾಹ್ನದ ಬಳಿಕ ಇರುತ್ತದೆ ಎಂದರು.

ಕಾಂಗ್ರೆಸ್ ಮುಖಂಡ ಎ. ಹೇಮನಾಥ ಶೆಟ್ಟಿ ಮಾತನಾಡಿ, ಹಬ್ಬದ ಆಚರಣೆಯನ್ನು ೧೦ ಗಂಟೆಗೆ ನಿಲ್ಲಿಸಿ ಎಂದು ನಿಯಮ ಹಾಕಿದರೆ ಕಷ್ಟ. ಕೆಲವು ಕಡೆ ಗಣೇಶನ ವಿಸರ್ಜನೆ ಬೆಳಿಗ್ಗಿನ ತನಕ ಇರುತ್ತದೆ. ಡಿ.ಜೆ. ಗೆ ನಾನು ವಿರೋಧಿ. ಉಳಿದಂತೆ ಇಲ್ಲಿ ಬೇರೆ ಸಮಸ್ಯೆ ಆಗುದಿಲ್ಲ ಎಂದು ಹೇಳಿದರು.

ಮಹಾಲಿಂಗೇಶ್ವರ ದೇವಾಲಯ ಬಳಿಯ ಗಣೇಶೋತ್ಸವ ಸಮಿತಿಯ ರಾಧಾಕೃಷ್ಣ ಗೌಡ ಮಾತನಾಡಿ, ಈ ಬಾರಿ ನಾವು ಡಿ.ಜೆ. ನಿಲ್ಲಿಸಿದ್ದೇವೆ. ಆದರೆ ಲಕ್ಷ ಖರ್ಚು ಮಾಡಿ ಟ್ಯಾಬ್ಲೋ ಇರುವುದರಿಂದ ಅವರು ತಕರಾರು ಮಾಡ್ತಿದ್ದಾರೆ. ಧ್ವನಿ ವರ್ಧಕದ ಮೂಲಕ ಕಡಿಮೆ ಸೌಂಡ್ಗೆ ಅವಕಾಶ ಕೊಡಬೇಕು ಎಂದು ವಿನಂತಿಸಿದರು.

ಸಭೆಯಲ್ಲಿ ಸಮಿತಿಗಳ ಮುಖಂಡರಾದ ಲೋಕೇಶ್ ಹೆಗ್ಡೆ, ಸುಂದರ ಪೂಜಾರಿ ಬಡಾವು, ಅಶ್ರಫ್ ಕಲ್ಲೇಗ, ಅಬೂಬಕ್ಕರ್ ಮುಲಾರ್, ಹನೀಫ್ ಬಗ್ಗುಮಲೆ ಮೊದಲಾದವರು ಮಾತನಾಡಿದರು.

ಪುತ್ತೂರು ಡಿವೈಎಸ್ಪಿ ಅರುಣ್ ನಾಗೇಗೌಡ, ಮಹಿಳಾ ಠಾಣೆಯ ಇನ್ಸ್ಪೆಕ್ಟರ್ ಸುನೀಲ್ ಕುಮಾರ್, ಸುಳ್ಯದ ಇನ್ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ನಗರಸಭಾ ಪೌರಾಯುಕ್ತೆ ವಿದ್ಯಾ ಕಾಳೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

error: Content is protected !!
Scroll to Top