ಕಟೀಲು : ತಮ್ಮನ ಅಂತ್ಯಕ್ರಿಯೆಗಾಗಿ ಗುಜರಾತ್‌ನಿಂದ ಬಂದಿದ್ದ ಅಣ್ಣನೂ ಕುಸಿದು ಬಿದ್ದು ಸಾವು

ಒಂದೇ ದಿನ ಇಬ್ಬರು ಸಹೋದರರ ಸಾವಿನಿಂದ ಆಘಾತಕ್ಕೊಳಗಾದ ಕುಟುಂಬ

ಮಂಗಳೂರು: ತಮ್ಮನ ಅಂತ್ಯಕ್ರಿಯೆಗಾಗಿ ದೂರದ ಗುಜರಾತ್‌ನಿಂದ ಬಂದಿದ್ದ ಅಣ್ಣನೂ ಅಂತ್ಯಕ್ರಿಯೆ ಮುಗಿಯುವ ಮೊದಲೇ ಸಾವಿಗೀಡಾದ ಘಟನೆ ಕಟೀಲು ಸಮೀಪ ನಿಡ್ಡೋಡಿ ಎಂಬಲ್ಲಿ ಶನಿವಾರ ಸಂಭವಿಸಿದೆ. ನಿಡ್ಡೋಡಿಯ ಮುದಲಾಡಿಗುತ್ತು ಮನೆಯ ಪ್ರವೀಣ್‌ ಶೆಟ್ಟಿ (49) ಮತ್ತು ಸಾಯಿಪ್ರಸಾದ್‌ ಶೆಟ್ಟಿ (52) ಒಂದೇ ದಿನ ಸಾವಿಗೀಡಾದ ಸಹೋದರರು.

ಪ್ರವೀಣ್‌ ಶೆಟ್ಟಿ ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಶುಕ್ರವಾರ ಅವರ ಪರಿಸ್ಥಿತಿ ಉಲ್ಬಣಿಸಿತ್ತು. ಮನೆಯವರು ಗುಜರಾತ್‌ನಲ್ಲಿರುವ ಸಾಯಿಪ್ರಸಾದ್‌ ಶೆಟ್ಟಿಯವರಿಗೆ ವಿಷಯ ತಿಳಿಸಿದ್ದರು. ಕೂಡಲೇ ಸಾಯಿಪ್ರಸಾದ್‌ ಶೆಟ್ಟಿ ರೈಲಿನಲ್ಲಿ ಊರಿಗೆ ಹೊರಟಿದ್ದರು. ಅವರು ಬಂದು ತಲುಪುವ ಮೊದಲೇ ಶನಿವಾರ ಬೆಳಗ್ಗೆ ಪ್ರವೀಣ್‌ ಶೆಟ್ಟಿ ಚಿಕಿತ್ಸೆ ಫಲಿಸದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.





















































 
 

ಸಂಜೆ 5.30ರ ವೇಳೆಗೆ ಸಾಯಿಪ್ರಸಾದ್‌ ಶೆಟ್ಟಿ ಮನೆಗೆ ತಲುಪಿ ತಮ್ಮನ ಅಂತ್ಯಕ್ರಿಯೆಯ ತಯಾರಿ ಆರಂಭಿಸಿದ್ದರು. ಆದರೆ ಅಷ್ಟರಲ್ಲಿ ಅವರಿಗೆ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಒಯ್ದರೂ ಪ್ರಯೋಜನವಾಗಲಿಲ್ಲ.

ಸಾಯಿಪ್ರಸಾದ್‌ ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಪ್ರವೀಣ್‌ ಶೆಟ್ಟಿ ಪತ್ನಿಯನ್ನು ಅಗಲಿದ್ದಾರೆ. ಈ ಸಹೋದರರಿಗೆ ತಾಯಿ ಮತ್ತು ಓರ್ವ ಸಹೋದರಿ ಇದ್ದಾರೆ. ಸಾಯಿಪ್ರಸಾದ್‌ ಅವರ ಪತ್ನಿ ಮತ್ತು ಮಕ್ಕಳು ಗುಜರಾತಿನಿಂದ ಬಂದ ಬಳಿಕ ಭಾನುವಾರ ಇಬ್ಬರು ಸಹೋದರರ ಅಂತ್ಯಕ್ರಿಯೆ ನಡೆಯಲಿದೆ.

ಈ ಸಹೋದರರ ಮನೆ ಬಾಲಿವುಟ್‌ ನಟಿ ಶಿಲ್ಪಾ ಶೆಟ್ಟಿಯವರ ಮೂಲ ಕುಟುಂಬದ ಮನೆಯಾಗಿದ್ದು, ಇಲ್ಲಿ 14 ವರ್ಷಗಳ ಹಿಂದೆ ದೈವಗಳ ನೇಮ ನಡೆದಿತ್ತು ಎಂಬ ವಿಚಾರವನ್ನು ಸ್ಥಳೀಯರು ತಿಳಿಸಿದ್ದಾರೆ.

error: Content is protected !!
Scroll to Top