ಬೆಂಗಳೂರು: ಗಣೇಶ ಚತುರ್ಥಿ ಮತ್ತು ಈದ್ ಹಬ್ಬದ ಆಚರಣೆಗಳು ಮುಗಿಯುವ ವರೆಗೆ ಡಿಜೆ ಸಿಸ್ಟಂ ಬಳಕೆಯನ್ನು ನಿಷೇಧಿಸುವಂತೆ ರಾಜ್ಯದ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಆದೇಶ ನೀಡಿದೆ.
ದಿನಾಂಕ ಆ. 27 ರಂದು ಗಣೇಶ ಹಬ್ಬದ ಪ್ರಯಕ್ತ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಟಾಪಿಸಿ, ನಂತರ ವಿವಿಧ ದಿನಗಳಂದು ವಿಸರ್ಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಹೀಗಾಗಿ ಆ.27 ರಿಂದ ಸೆ.15 ರವರೆಗೆ ಒಟ್ಟು 20 ದಿನಗಳ ಕಾಲ ವಿವಿಧ ಜಿಲ್ಲೆಗಳಲ್ಲಿ ಪ್ರಮುಖ, ಅತಿಸೂಕ್ಷ್ಮ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಿದ್ದಾರೆ. ಹಾಗೂ ಸೆ. 5 ರಿಂದ 10 ರವರೆಗೆ ಜಿಲ್ಲೆಯಾದ್ಯಂತ ಮುಸ್ಲಿಮರು ಈದ್ ಮಿಲಾದ್ ಹಬ್ಬ ಆಚರಿಸಲಿದ್ದು ಈ ಸಂದರ್ಭದಲ್ಲಿ ಡಿಜೆ ಬಳಕೆ ಮಾಡದಂತೆ ಸೂಚಿಸಲಾಗಿದೆ.
ಡಿಜೆ ಬಳಕೆಯಿಂದ ರೋಗಿಗಳು, ವೃದ್ಧರು, ಮಕ್ಕಳು, ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಿಗೆ ತೊಂದರೆಯಾಗುವ ಸಾಧ್ಯತೆ ಇದ್ದು, ಕಾನೂನು ಸುವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮವಾಗುವ ಸಾಧ್ಯತೆ ಇದೆ. ಆದ್ದರಿಂದ ಸಾಮಾಜಿಕ ಶಾಂತಿ, ಸೌಹಾರ್ಧತೆ ಕಾಪಾಡುವ ನಿಟ್ಟಿನಲ್ಲಿ ಈ ಕ್ರಮ ಅನುಸರಿಸುವಂತೆ ತಿಳಿಸಲಾಗಿದೆ.
























