ಅಮಲು ಬರುವ ಪಾನೀಯ, ಚುಚ್ಚುಮದ್ದು ನೀಡಿ ಲೈಂಗಿಕ ಶೋಷಣೆ
ಮುಂಬಯಿ : ಬಾಂಗ್ಲಾದೇಶ ಮೂಲದ 12 ವರ್ಷದ ಬಾಲಕಿಯ ಮೇಲೆ ಮೂರು ತಿಂಗಳಲ್ಲಿ 200ಕ್ಕೂ ಹೆಚ್ಚು ಮಂದಿ ಅತ್ಯಾಚಾರವೆಸಗಿದ ಭಯಾನಕ ಕೃತ್ಯವೊಂದು ಮುಂಬಯಿಯಲ್ಲಿ ಬೆಳಕಿಗೆ ಬಂದಿದೆ. ಪರೀಕ್ಷೆಯಲ್ಲಿ ಅನುತ್ತೀರ್ಣಳಾಗಿದ್ದ ಕಾರಣ ಬೇಸರಗೊಂಡು ಪರಿಚಯಸ್ಥ ಮಹಿಳೆಯೊಬ್ಬಳ ಜತೆಗೆ ದೇಶಬಿಟ್ಟು ಓಡಿಬಂದಿದ್ದ ಬಾಲಕಿ ಮುಂಬಯಿಯಲ್ಲಿ ಮಾನವ ಕಳ್ಳಸಾಗಣೆ ಜಾಲದಲ್ಲಿ ಆಕೆ ಸಿಕ್ಕಿಬಿದ್ದು ನರಕ ಯಾತನೆ ಅನುಭವಿಸಿದ್ದಾಳೆ.
ಯಾರೋ ಆಕೆಗೆ ಭಾರತದೊಳಗೆ ನುಸುಳಲು ಅವಕಾಶ ಮಾಡಿಕೊಟ್ಟಿದ್ದರು. ಇಲ್ಲಿ ಮಾನವ ಕಳ್ಳಸಾಗಣೆ ಜಾಲದಲ್ಲಿ ಆಕೆಯನ್ನು ತೊಡಗುವಂತೆ ಮಾಡಿದ್ದರು. ಮಹಾರಾಷ್ಟ್ರದ ಪಾಲ್ಘರ್ನಲ್ಲಿ ಈ ದಂಧೆಯನ್ನು ಭೇದಿಸಿದ ಪೊಲೀಸರು ಜುಲೈ 26ರಂದು ಅಪ್ರಾಪ್ತ ಬಾಲಕಿಯನ್ನು ಹಾಗೂ ಇತರ ನಾಲ್ವರು ಮಹಿಳೆಯರನ್ನು ರಕ್ಷಿಸಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಬಾಲಕಿ ತನ್ನ ಮೇಲೆ 200ಕ್ಕೂ ಹೆಚ್ಚು ಮಂದಿ ಅತ್ಯಾಚಾರ ಎಸಗಿರುವ ವಿಚಾರ ತಿಳಿಸಿದ್ದಾಳೆ.
ಈ ದಂಧೆಗೆ ಸಂಬಂಧಿಸಿದಂತೆ ಒಟ್ಟು ಒಂಬತ್ತು ಜನರನ್ನು ಬಂಧಿಸಲಾಗಿದೆ. ಭಾರತಕ್ಕೆ ಕಳ್ಳಸಾಗಣೆ ಮಾಡಿದ ನಂತರ ಬಾಲಕಿಗೆ ಅಮಲು ಬರುವ ಪಾನೀಯ ಹಾಗೂ ಚುಚ್ಚುಮದ್ದುಗಳನ್ನು ನೀಡಿ ಪುರುಷರೊಟ್ಟಿಗೆ ಬಿಡಲಾಗುತ್ತಿತ್ತು. 12 ವರ್ಷದ ಬಾಲಕಿ ತನ್ನನ್ನು ಮೊದಲು ಗುಜರಾತ್ನ ನಾಡಿಯಾಡ್ಗೆ ಕರೆದೊಯ್ದು ಮೂರು ತಿಂಗಳ ಅವಧಿಯಲ್ಲಿ 200ಕ್ಕೂ ಹೆಚ್ಚು ಪುರುಷರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ತಿಳಿಸಿದ್ದಾಳೆ.
ಆಕೆ ಇನ್ನೂ ಚಿಕ್ಕವಳು, ಹದಿಹರೆಯದ ವಯಸ್ಸನ್ನೂ ತಲುಪಿಲ್ಲ. ಆದರೆ ರಾಕ್ಷಸರು ಆಕೆಯ ಬಾಲ್ಯವನ್ನು ಕಸಿದಿದ್ದಾರೆ ಎಂದು ಹಾರ್ಮನಿ ಫೌಂಡೇಶನ್ನ ಸ್ಥಾಪಕ ಅಧ್ಯಕ್ಷ ಅಬ್ರಹಾಂ ಮಥಾಯ್ ಹೇಳಿದ್ದಾರೆ. ಬಾಲಕಿಯ ಮೇಲೆ ದೌರ್ಜನ್ಯ ಎಸಗಿದ ಎಲ್ಲ 200 ಪುರುಷರನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.
ಆ ಬಾಲಕಿ ಶಾಲೆಯಲ್ಲಿ ಕೇವಲ ಒಂದು ವಿಷಯದಲ್ಲಿ ಅನುತ್ತೀರ್ಣಳಾಗಿದ್ದಳು, ಪೋಷಕರ ಭಯದಿಂದ ಮನೆಯಿಂದ ಓಡಿ ಹೋಗಲು ನಿರ್ಧರಿಸಿದ್ದಳು. ಪರಿಚಯಸ್ಥ ಮಹಿಳೆಯೊಂದಿಗೆ ಕಳ್ಳದಾರಿ ಮೂಲಕ ಭಾರತ ಪ್ರವೇಶಿಸಿದ್ದಳು. ದೇಶದ ಹಲವೆಡೆ ಹೆಚ್ಚಾಗಿ ಹಳ್ಳಿಗಳಿಂದ ಶಿಶುಗಳನ್ನು ಕದ್ದು ನಗರಗಳಿಗೆ ಕರೆತಂದು ಶೋಷಣೆಗೆ ಒಳಪಡಿಸಲಾಗುತ್ತದೆ. ಅವರಿಗೆ ಹಾರ್ಮೋನ್ ಚುಚ್ಚುಮದ್ದನ್ನು ಸಹ ನೀಡಲಾಗುತ್ತದೆ, ಬಳಿಕ ವೇಶ್ಯಾವಾಟಿಕೆಗೆ ತಳ್ಳಲಾಗುತ್ತದೆ. ಇದರಿಂದ ಅವರು ಬೇಗನೆ ಪ್ರೌಢಾವಸ್ಥೆಗೆ ಬರುತ್ತಾರೆ ಎಂದು ಮಥಾಯ್ ಹೇಳಿದ್ದಾರೆ.
























