ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನಡುವಿನ ಕಲಹಕ್ಕೆ ಸಹಕಾರ ಸಚಿವ ಕೆ. ಎನ್. ರಾಜಣ್ಣ ಅವರ ತಲೆದಂಡವಾಗಿದೆ ಎಂದು ಶಾಸಕ ಅರವಿಂದ ಬೆಲ್ಲದ್ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸತ್ಯ ಹೇಳುವವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಸ್ಥಾನವಿಲ್ಲ. ಸ್ವತಃ ರಾಜಣ್ಣ ಅವರೇ ತಮ್ಮ ಉಚ್ಛಾಟನೆಯ ಹಿಂದೆ ಷಡ್ಯಂತ್ರ ಇರುವುದಾಗಿ ಹೇಳಿಕೊಂಡಿದ್ದಾರೆ. ಅವರು ಮಾಡಿರುವ ಆರೋಪ ನೂರಕ್ಕೆ ನೂರು ಸತ್ಯ ಎಂದು ಬೆಲ್ಲದ್ ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಕಿವಿಗೆ ರಾಜಣ್ಣ ಎಲ್ಲೋ ಹೇಳಿದ ಮಾತೊಂದನ್ನು ಮುಟ್ಟಿಸಲಾಗಿದೆ. ನಿಮ್ಮದೇ ಮಂತ್ರಿಗಳು ನಿಮ್ಮ ವಿರುದ್ಧ ಮಾತನಾಡುತ್ತಾರೆ ಎನ್ನುವ ಮೂಲಕ ರಾಜಣ್ಣ ಅವರಿಗೆ ಗೇಟ್ ಪಾಸ್ ನೀಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
























