ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಸಂದರ್ಭ ಗಣೇಶನಿಗೆ ಪ್ರಿಯವಾದ ಮೋದಕ ಹೋಮ ಆ.27ರಂದು ನಡೆಯಲಿದ್ದು, ಇದರ ಮೋದಕ ಸೇವಾ ರಶೀದಿಯನ್ನು ದೇವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು. ಪ್ರಧಾನ ಅರ್ಚಕ ವೇ.ಮೂ. ವಸಂತ ಕೆದಿಲಾಯ ಪ್ರಾರ್ಥನೆ ನೆರವೇರಿಸಿದರು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮಾತನಾಡಿ, ಪ್ರತೀ ವರ್ಷ ಗಣೇಶ ಚತುರ್ಥಿಯಂದು 108 ಕಾಯಿ ಗಣಪತಿ ಹೋಮ ನಡೆಯುತ್ತದೆ. ಈ ಬಾರಿ ವಿಶೇಷವಾಗಿ ಗಣಪತಿಗೆ ಅತಿ ಪ್ರಿಯವಾದ ಮೋದಕ ಹೋಮ ಮಾಡುತ್ತಿದ್ದೇವೆ. ಯಾವ ದೇವರಿಗೆ ಯಾವ ಪೂಜೆ ಮಾಡಿದರೆ ಶ್ರೇಯಸ್ಸು ಎಂಬ ನಿಯಮವಿದೆ. ಗಣಪತಿ ದೇವರಿಗೆ ಮೋದಕ ಪ್ರಿಯವಾದ ಕಾರಣ ಹೋಮದ ಮೂಲಕ ಅದನ್ನು ದೇವರಿಗೆ ಸಮರ್ಪಿಸಲು ನಿರ್ಧರಿಸಲಾಗಿದೆ. ಭಕ್ತರು ಮೋದಕ ಹೋಮ ಸೇವೆ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವಿನಯ ಸುವರ್ಣ, ಸುಭಾಶ್ ರೈ ಬೆಳ್ಳಿಪ್ಪಾಡಿ, ಕೃಷ್ಣವೇಣಿ, ಕಾರ್ಯನಿರ್ವಹಣಾಧಿಕಾರಿ ಕೆ.ವಿ ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ಉಪಸ್ಥಿತರಿದ್ದರು.
























