ಮೈಸೂರು: ಮತಗಳ್ಳತನ ವಿಷಯಕ್ಕೆ ಸಂಬಂಧಿಸಿದ ಹಾಗೆ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದು, ಈ ವಿಚಾರದಲ್ಲಿ ರಾಹುಲ್ ಗಾಂಧಿ ಹೇಳಿದ್ದರಲ್ಲಿ ಕೆಲವು ಸತ್ಯವಿದೆ. ಈ ಬಗ್ಗೆ ನಮ್ಮ ಲೀಗಲ್ ಟೀಂ ಜೊತೆಗೆ ಚರ್ಚೆ ನಡೆಸಿ ಮುಂದಿನ ಕಾನೂನು ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.
ಈ ಸಂಬಂಧ ಮೈಸೂರಿನಲ್ಲಿ ಮಾತನಾಡಿದ ಅವರು, ಮತಗಳ್ಳತನಕ್ಕೆ ಸಂಬಂಧಿಸಿದ ಹಾಗೆ ನಾವು ಸಂಶೋಧನೆ ಮಾಡುತ್ತಿದ್ದೆವು. ಈಗ ಅದು ಸತ್ಯ ಎಂದು ಗೊತ್ತಾಗಿದೆ. ಹಾಗಾಗಿ ನಾವು ಹೋರಾಟ ಆರಂಭಿಸಿದ್ದೇವೆ ಎಂದು ತಿಳಿಸಿದ್ದಾರೆ.
ಎಂಬತ್ತು ಜನರು ಒಂದೇ ಕೊಠಡಿಯಲ್ಲಿ ಹೇಗಿದ್ದರು ಎನ್ನುವುದನ್ನು ಬಿಜೆಪಿಗರು ಹೇಳಲಿ. ಅವರು ಹೊಟೇಲ್ನಲ್ಲಿ ಕೆಲಸ ಮಾಡುವವರೇ ಆಗಿದ್ದರೂ ಒಂದೇ ಕೋಣೆಯಲ್ಲಿರುವುದು ಸಾಧ್ಯವೇ? ನಮ್ಮ ಸರ್ವೇ ಪ್ರಕಾರ ಕಳೆದ ಲೋಕಸಭಾ ಚುನಾವಣೆಯಲ್ಲಿ ನಾವು 16 ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆ ಇತ್ತು. ಅದು ನಡೆದಿಲ್ಲ ಎಂದು ತಿಳಿಸಿದ್ದಾರೆ.
ಬಾದಾಮಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಮತ ಖರೀದಿ ಮಾಡಿ ಗೆಲುವು ಸಾಧಿಸಿದರು ಎಂಬ ಸಿ ಎಂ ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಆ ಸಂದರ್ಭದಲ್ಲಿ ಎರಡು ಬಾರಿ ಮಾತ್ರ ಬಾದಾಮಿಗೆ ಹೋಗಿದ್ದೆ. ಸಿ ಎಂ ಇಬ್ರಾಹಿಂ ಈಗ ಪಕ್ಷದಲ್ಲಿಲ್ಲ. ಆಗ ಅವರು ನನ್ನ ಪರ ಪ್ರಚಾರ ಮಾಡಿದ್ದರು. ಮತ ಖರೀದಿ ಮಾಡಿದ್ದರು ಎನ್ನುವುದು ನನಗೆ ಹೊಸ ಸಂಗತಿ ಎಂದರು.
ಸತ್ತವರು ಕೆಟ್ಟವರು ಮತ ಹಾಕಿ ತಮ್ಮನ್ನು ಗೆಲ್ಲಿಸಿದ್ದಾಗಿ ಈ ಹಿಂದೆ ಹೇಳಿದ್ದ ಅವರದ್ದೇ ಹೇಳಿಕೆಗೆ ಸ್ಪಷ್ಟನೆ ನೀಡಿದ ಅವರು, ನಾನು ಹಾಗೆ ಹೇಳಿಯೇ ಇಲ್ಲ. ಒಂದು ವೇಳೆ ಹಾಗೆ ಆಗಿದ್ದರೆ ಅದಕ್ಕೆ ಯಾರು ಹೊಣೆ? ಚುನಾವಣಾ ಆಯೋಗ ಅಲ್ಲವೇ? ಎಂದು ಕೇಳಿದ್ದಾರೆ.
























