ಮೂರು ವರ್ಷದ ಹಿಂದೆ ಆಟೋರಿಕ್ಷಾದಲ್ಲಿ ಬಾಂಬ್ ಸ್ಫೋಟಗೊಂಡ ಪ್ರಕರಣ
ಮಂಗಳೂರು : ಮಂಗಳೂರಿನ ಕಂಕನವಾಡಿ ಬಳಿ 2022ರಲ್ಲಿ ಆಟೋರಿಕ್ಷಾದಲ್ಲಿ ಸಂಭವಿಸಿದ್ದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ತನಿಖೆಗೆ ಈಗ ಜಾರಿ ನಿರ್ದೇಶನಾಲಯ ಎಂಟ್ರಿ ಕೊಟ್ಟಿದೆ. ಹಣ ಅಕ್ರಮ ವರ್ಗಾವಣೆ ತಡೆ ಕಾಯಿದೆಯಡಿ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದೆ. ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಮುಖ್ಯ ಆರೋಪಿ ಸೈಯದ್ ಯಾಸೀನ್ನ ಬ್ಯಾಂಕ್ ಖಾತೆಯನ್ನು ಜಪ್ತಿ ಮಾಡಲಾಗಿದೆ.
ಉಗ್ರ ಸಂಘಟನೆಯನ್ನು ಭಾರತದಾದ್ಯಂತ ವಿಸ್ತರಿಸುವುದು, ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರುವುದು ಐಸಿಸ್ ಸಂಘಟನೆ ಗುರಿಯಾಗಿತ್ತು. ಐಸಿಸ್ನ ಹ್ಯಾಂಡ್ಲರ್ಗಳಿಗೆ ಆನ್ಲೈನ್ನಲ್ಲಿ ಟೆಲಿಗ್ರಾಂ ಆ್ಯಪ್ ಮೂಲಕ ತರಬೇತಿ ನೀಡಲಾಗುತ್ತಿತ್ತು. ಆರೋಪಿ ಮಾಜ್ ಮುನೀರ್ ಕ್ರಿಪ್ಟೊ ಕರೆನ್ಸಿಯನ್ನು ಏಜೆಂಟ್ಸ್ಗಳ ಮೂಲಕ ಮಹಮ್ಮದ್ ಶಾರೀಕ್ಗೆ ತಲುಪಿಸಿದ್ದನು. ಪ್ರಕರಣ ಪ್ರಮುಖ ಆರೋಪಿ ಮೊಹಮ್ಮದ್ ಶಾರೀಕ್ ಅಲಿಯಾಸ್ ಪ್ರೇಮ್ ರಾಜ್ ಕೂಡ ಕ್ರಿಪ್ಟೊ ಕರೆನ್ಸಿ ಮೂಲಕ ಇತರ ಆರೋಪಿಗಳಿಗೆ ಹಣ ವರ್ಗಾವಣೆ ಮಾಡುತ್ತಿದ್ದನು. ಹೀಗೆ ಇದರಲ್ಲಿ ಹಣಕಾಸಿನ ವಹಿವಾಟು ಬಹಳ ನಡೆದಿರುವ ಹಿನ್ನೆಲೆಯಲ್ಲಿ ಇ.ಡಿ. ತನಿಖೆ ಪ್ರಾರಂಭಿಸಿದೆ.
ಮೊಹಮ್ಮದ್ ಶಾರೀಕ್ 2.68 ಲಕ್ಷ ರೂ. ಮೌಲ್ಯದ ಕ್ರಿಪ್ಟೊ ಕರೆನ್ಸಿ ಏಜೆಂಟ್ಸ್ಗಳ ಮೂಲಕ ಆರೋಪಿಗಳಿಗೆ ವರ್ಗಾವಣೆ ಮಾಡಿದ್ದನು. ಈ ಹಣದಿಂದ ಆರೋಪಿಗಳು ಆನ್ಲೈನ್ನಲ್ಲಿ ಬಾಂಬ್ ತಯಾರಿಕೆಗೆ ಬೇಕಾದ ಕಚ್ಚಾ ಸಾಮಾಗ್ರಿ ಖರೀದಿಸುತ್ತಿದ್ದರು. ಮೈಸೂರು, ಕೇರಳ, ತಮಿಳುನಾಡುನಲ್ಲೂ ಬಾಂಬ್ ಇಡಲು ಪ್ಲಾನ್ ಮಾಡಲಾಗಿತ್ತು. ಧರ್ಮಸ್ಥಳ ಮಂಜುನಾಥ ಸ್ವಾಮಿ ದೇಗುಲದ ಬಳಿಯಲ್ಲೂ ಆಟೋದಲ್ಲಿ ಬ್ಲಾಸ್ಟ್ ಮಾಡುವ ಪ್ಲಾನ್ ಮಾಡಲಾಗಿತ್ತು ಎಂದು ಜಾರಿ ನಿರ್ದೇಶನಲಯ ತಿಳಿಸಿದೆ.
2022ರ ನವೆಂಬರ್ 19ರಂದು ಮಂಗಳೂರಿನ ಕಂಕನಾಡಿ ಬಳಿ ಆಟೋರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಬಾಂಬ್ ಸ್ಫೋಟಗೊಂಡಿತ್ತು. ಆರೋಪಿ ಶಾರಿಕ್ ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿರುವಾಗಲೇ ಅವನ ಮಡಿಲಲ್ಲಿದ್ದ ಕುಕ್ಕರ್ ಬಾಂಬ್ ಸ್ಫೋಟಿಸಿತ್ತು. ಘಟನೆ ಸಂಬಂಧ ಆಟೋ ಚಾಲಕ ಪುರುಷೋತ್ತಮ ನೀಡಿದ ದೂರಿನನ್ವಯ ಮಂಗಳೂರಿನ ಕಂಕನಾಡಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ನಂತರ, ರಾಷ್ಟ್ರೀಯ ತನಿಖಾ ದಳ ಪ್ರಕರಣ ಕೈಗೆತ್ತಿಕೊಂಡು ತನಿಖೆ ನಡೆಸುತ್ತಿದೆ.
























