ಅನಿಲ್ ಅಂಬಾನಿಗೆ ಸೇರಿದ 35 ಸ್ಥಳಗಳಲ್ಲಿ ಇ.ಡಿ. ಅಧಿಕಾರಿಗಳಿಂದ ಪರಿಶೋಧನೆ
ಮುಂಬೈ: ಯೆಸ್ ಬ್ಯಾಂಕ್ಗೆ 3,000 ಕೋಟಿ ಸಾಲ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಪ್ರತಿಷ್ಠಿತ ಉದ್ಯಮಿ ಅನಿಲ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಗ್ರೂಪ್ಗೆ ಸೇರಿದ ಹಲವು ಕಂಪನಿಗಳ ಮೇಲೆ ಇಂದು ದಾಳಿ ಮಾಡಿದೆ.
ಅನಿಲ್ ಅಂಬಾನಿಯ ಕಂಪನಿಗೆ ಸಂಬಂಧಪಟ್ಟ 35ಕ್ಕೂ ಹೆಚ್ಚು ಸ್ಥಳಗಳು, ರಿಲಯನ್ಸ್ ಅನಿಲ್ ಅಂಬಾನಿ ಗ್ರೂಪ್ನ 50 ಕಂಪನಿಗಳ ಮೇಲೆ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಇಡಿ ದಾಳಿ ನಡೆಸಿದೆ. ಯೆಸ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ದಾಖಲಿಸಿದ್ದ 2 ಎಫ್ಐಆರ್ಗಳನ್ನು ಆಧರಿಸಿ ಹಾಗೂ ಬ್ಯಾಂಕ್ ಆಫ್ ಬರೋಡಾ, ನ್ಯಾಷನಲ್ ಹೌಸಿಂಗ್ ಬ್ಯಾಂಕ್ ಮತ್ತಿತರ ಏಜೆನ್ಸಿಗಳಿಂದ ದೊರೆತ ಮಾಹಿತಿ ಆಧಾರದ ಮೇಲೆ ತೀವ್ರ ಶೋಧ ನಡೆಸುತ್ತಿದೆ. 25ಕ್ಕೂ ಹೆಚ್ಚು ಮಂದಿಯನ್ನೂ ವಿಚಾರಣೆಗೆ ಒಳಪಡಿಸಲಾಗಿದೆ.
2017 ಮತ್ತು 2019ರ ನಡುವೆ ರಿಲಯನ್ಸ್ ಅನಿಲ್ ಅಂಬಾನಿ ಗ್ರೂಪ್ ಅಡಿಯಲ್ಲಿರುವ ಸಂಸ್ಥೆಗಳಿಗೆ ಯೆಸ್ ಬ್ಯಾಂಕ್ 3,000 ಕೋಟಿ ರೂ. ಸಾಲ ನೀಡಿತ್ತು. ಆದ್ರೆ ಈ ಸಾಲದ ಹಣವನ್ನ ಗ್ರೂಪ್ನ ಇತರ ಶೆಲ್ ಕಂಪನಿಗಳಿಗೆ (ಬೇನಾಮಿ ಕಂಪನಿ) ಅಕ್ರಮವಾಗಿ ವರ್ಗಾವಣೆ ಮಾಡಲಾಗಿತ್ತು. ಈ ಮೂಲಕ ಬ್ಯಾಂಕ್ಗಳು, ಷೇರುದಾರರು, ಹೂಡಿಕೆದಾರರು ಮತ್ತು ಇತರ ಸಾರ್ವಜನಿಕ ಸಂಸ್ಥೆಗಳನ್ನು ವಂಚಿಸುವ ಮೂಲಕ ಸಾರ್ವಜನಿಕ ಹಣವನ್ನು ದುರ್ಬಳಕೆ ಮಾಡಿಕೊಂಡಿರುವುದಾಗಿ ಇ.ಡಿ ಪತ್ತೆಹಚ್ಚಿದೆ. ಪ್ರಾಥಮಿಕ ತನಿಖೆಯಲ್ಲಿ ಇದಕ್ಕೆ ಸಾಕ್ಷ್ಯಾಧಾರಗಳೂ ಸಿಕ್ಕಿವೆ ಅಂತ ಇಡಿ ಹೇಳಿದೆ.
ಸಾಲ ಅನುಮೋದನೆ ವಿಚಾರದಲ್ಲಿ ಯೆಸ್ ಬ್ಯಾಂಕ್ ಪ್ರಕ್ರಿಯೆ ಅನುಮಾನಾಸ್ಪದವಾಗಿದೆ. ಸರಿಯಾದ ಹಣಕಾಸು ಸ್ಥಿತಿ ಇಲ್ಲದ ಕಂಪನಿಗಳು, ಸಾಮಾನ್ಯ ನಿರ್ದೇಶಕರಿರುವ ಕಂಪನಿಗಳಿಗೆ ಸಾಲ ಮಂಜೂರು ಮಾಡಲಾಗಿದೆ. ಸರಿಯಾಗಿ ಅವಲೋಕನ ಮಾಡುವ ಪ್ರಯತ್ನ ಆಗಿಲ್ಲ. ಸಾಲಕ್ಕೆ ಅನುಮೋದನೆ ಆಗುವ ಮುನ್ನವೇ ಅಥವಾ ಅದೇ ದಿನವೇ ಸಾಲದ ಹಣ ಬಿಡುಗಡೆ ಮಾಡಲಾಗಿದೆ ಎಂದು ಯೆಸ್ ಬ್ಯಾಂಕ್ನ ವ್ಯವಸ್ಥೆಯಲ್ಲಿರುವ ಲೋಪಗಳನ್ನು ಇ.ಡಿ ಎತ್ತಿ ತೋರಿಸಿದೆ. ಈ ಹಿನ್ನೆಲೆಯಲ್ಲಿ ಇ.ಡಿ ನೀಡಿರುವ ಮಾಹಿತಿ ಪ್ರಕಾರ ರಿಲಯನ್ಸ್ ಗ್ರೂಪ್ಗೆ ಸೇರಿದ 50 ಕಂಪನಿಗಳ ಮೇಲೆ ಇಡಿ ದಾಳಿ ನಡೆಸಿದ್ದು ಶೋಧ ಆರಂಭಿಸಿದೆ.
3,000 ಕೋಟಿ ರೂ. ಸಾಲ ಮಂಜೂರು ಮಾಡಲು ಯೆಸ್ ಬ್ಯಾಂಕ್ನ ಸಿಇಒ ಹಾಗೂ ಇತರರು ಭಾಗಿಯಾಗಿದ್ದಾರೆ. ದೊಡ್ಡ ಮಟ್ಟದ ಸಾಲ ಮಂಜೂರು ಮಾಡಿಸಲು ಕೆಲ ಬ್ಯಾಂಕ್ ಅಧಿಕಾರಿಗಳು ಲಂಚ ಪಡೆದಿರಬಹುದು ಎಂದು ಇ.ಡಿ ಶಂಕಿಸಿದೆ. ಈ ಬೆನ್ನಲ್ಲೇ ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ನಲ್ಲಿ ಭಾರಿ ಅಕ್ರಮ ನಡೆದಿರುವ ಬಗ್ಗೆ ಷೇರು ಪೇಟೆ ನಿಯಂತ್ರಕ ವ್ಯವಸ್ಥೆ ಸೆಬಿ ವರದಿಯೊಂದನ್ನು ಸಲ್ಲಿಸಿದೆ. ಈ ವರದಿಯ ಪ್ರಕಾರ ಸಂಸ್ಥೆಯ ಕಾರ್ಪೊರೇಟ್ ಸಾಲ ಬಂಡವಾಳವು 2017-18ನೇ ಹಣಕಾಸು ವರ್ಷದಲ್ಲಿ 3,742 ಕೋಟಿ ರೂ.ಗಳಷ್ಟಿತ್ತು. ಆದ್ರೆ 2018-19ನೇ ಹಣಕಾಸು ವರ್ಷದಲ್ಲಿ ಇದರ ಪ್ರಮಾಣ 8,670 ಕೋಟಿ ರೂ.ಗಳಿಗೆ ಏರಿಕೆಯಾಗಿದೆ ಎಂದು ಸೆಬಿ ತನ್ನ ವರದಿಯಲ್ಲಿ ಹೇಳಿದೆ.
























