20 ವರ್ಷಗಳಿಂದ ಕಲಾಸಂಗಮ ತಂಡದಲ್ಲಿ ಬಣ್ಣ ಹಚ್ಚುತ್ತಿದ್ದ ಕಲಾವಿದ
ಬಂಟ್ವಾಳ: ತುಳು ರಂಗಭೂಮಿಯ ಹಿರಿಯ ಕಲಾವಿದ, ಚಲನಚಿತ್ರ ನಟ ಚಿ.ರಮೇಶ್ ಕಲ್ಲಡ್ಕ (68) ಹೃದಯಾಘಾತದಿಂದ ಬುಧವಾರ ಬೆಳಗ್ಗೆ ಕಲ್ಲಡ್ಕದ ಕೊಳಕೀರುವಿನಲ್ಲಿರುವ ಮನೆಯಲ್ಲಿ ನಿಧನ ಹೊಂದಿದ್ದಾರೆ. ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.
ರಂಗಭೂಮಿಯಲ್ಲಿ 30 ವರ್ಷಗಳಿಗೂ ಹೆಚ್ಚು ಕಾಲ ಕಲಾಸೇವೆಗೈದಿರುವ ರಮೇಶ್ ಕಲ್ಲಡ್ಕ ಕಳೆದ 20 ವರ್ಷಗಳಿಂದ ವಿಜಯಕುಮಾರ್ ಕೊಡಿಯಾಲಬೈಲ್ ಅವರ ಕಲಾಸಂಗಮ ತಂಡದಲ್ಲಿ ಕಲಾಸೇವೆ ಮಾಡುತ್ತಿದ್ದರು. ವಿಜಯಕುಮಾರ್ ಕೊಡಿಯಾಲಬೈಲ್ ಅವರಿಂದ ತರಬೇತಿ ಪಡೆದ ರಮೇಶ್ ಕಲ್ಲಡ್ಕ ಕಲಾಸಂಗಮದ ಎಲ್ಲ ಸಾಮಾಜಿಕ, ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ.
‘ಶಿವದೂತ ಗುಳಿಗೆ’ ನಾಟಕದ ಭೀಮಾರಾವ್ ಪಾತ್ರ ಅವರಿಗೆ ವ್ಯಾಪಕ ಮನ್ನಣೆ ತಂದುಕೊಟ್ಟಿದೆ. ಶಿವಾಜಿ ನಾಟಕದಲ್ಲೂ ಅವರು ನಿರ್ವಹಿಸಿದ ದಾದಾಕೊಂಡೆಯ ಪಾತ್ರದ ಅಭಿನಯವು ವ್ಯಾಪಕ ಗಮನ ಸೆಳೆದಿತ್ತು.
ರಂಗಭೂಮಿಯಲ್ಲಿ ಶಿಸ್ತಿನ ಕಲಾವಿದರಾಗಿದ್ದ ರಮೇಶ್ ಕಲ್ಲಡ್ಕ, ಸರಳ ಸೌಮ್ಯಸ್ವಭಾವವರು. ಕಲಾಸಂಗಮದ ಮೂಲಕ ಮುಂಬೈ, ಬೆಂಗಳೂರು ಸಹಿತ ಬೇರೆ ಬೇರೆ ಊರುಗಳಲ್ಲಿ ನಾಟಕ ಪ್ರದರ್ಶನ ನೀಡಿದ್ದರು.
























