ವಿಜಯಪುರ: ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಅವರೇ ಐದು ವರ್ಷಗಳ ಕಾಲ ಮುಂದುವರೆಯುವುದಾಗಿ ಹೇಳಿಕೊಂಡಿದ್ದಾರೆ. ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸಿಎಂ ಕುರ್ಚಿ ಖಾಲಿ ಇಲ್ಲ ಎಂದು ಹೇಳಿದ್ದಾರೆ. ಹೀಗಿರುವಾಗ ಇದರಲ್ಲಿ ಮುಸುಕಿನ ಗುದ್ದಾಟದ ಪ್ರಶ್ನೆ ಎಲ್ಲಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಕೇಳಿದ್ದಾರೆ.
ಮುಖ್ಯಮಂತ್ರಿ ಸ್ಥಾನದ ಬಗ್ಗೆ ಸಿ ಎಂ, ಡಿಸಿಎಂ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಮತ್ತೆ ನಾವೇನು ಮಾತನಾಡಲು ಸಾಧ್ಯ. ನಮ್ಮಲ್ಲಿ ಏನಿದ್ದರೂ ಹೈಕೋರ್ಟ್ ನಿರ್ಧಾರ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯೂ ಹೈ ಕಮಾಂಡ್ ಕೈಯಲ್ಲಿರುವುದು. ಒಬ್ಬರಿಗೆ ಒಂದೇ ಹುದ್ದೆ ಎನ್ನುವ ವಿಷಯವೂ ಹೈಕಮಾಂಡ್ಗೆ ಬಿಟ್ಟದ್ದು. ನಾನು ನನ್ನ ಇಲಾಖೆಯ ಕೆಲಸಗಳಿಗೆ ಸಂಬಂಧಿಸಿದ ಹಾಗೆ ದೆಹಲಿಗೆ ಹೋಗಬೇಕಾಗುತ್ತದೆ. ಇದರಲ್ಲಿ ರಾಜಕಾರಣ ಮಾಡಬೇಕಾಗಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.
ರಾಜ್ಯದ ಕಾಂಗ್ರೆಸ್ ಸರ್ಕಾರ ಕೈ ಶಾಸಕರಿಗೆ ತಲಾ 50 ಕೋಟಿ ರೂ. ಮತ್ತು ಬಿಜೆಪಿ ಶಾಸಕರಿಗೆ 25 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಈ ಹಿಂದೆ ಬಿಜೆಪಿ ಸಹ ಇದೇ ತಾರತಮ್ಯ ಮಾಡಿತ್ತು. ಬಿಜೆಪಿ ಶಾಸಕರಿಗೆ 100 ಕೋಟಿ ರೂ. ಮತ್ತು ಕೈ ಶಾಸಕರಿಗೆ ಕೇವಲ 5 ಕೋಟಿ ರೂ. ಅನುದಾನ ನೀಡಿ ತಾರತಮ್ಯ ಮಾಡಿತ್ತು. ಆದರೆ ನಮ್ಮ ಸರ್ಕಾರ ಕೈ ಶಾಸಕರಿಗೆ ನೀಡಿದ ಅರ್ಧದಷ್ಟು ಅನುದಾನ ಬಿಜೆಪಿ ಶಾಸಕರಿಗೆ ನೀಡಿದೆ ಎಂದು ಸಮಜಾಯಿಶಿ ನೀಡಿದ್ದಾರೆ.
























