ಕಡಬ: ಹಡಿಲು ಬಿದ್ದ ಕೃಷಿ ಭೂಮಿಯನ್ನು ಫಲವತ್ತತೆ ಮಾಡುವ ನಿಟ್ಟಿನಲ್ಲಿ ಕೆಸರ್ಡ್ ಒಂಜಿ ದಿನ ನೇಜಿ ನಾಟಿ ಕಾರ್ಯಕ್ರಮ ಕಡಬ ತಾಲೂಕಿನ ಬಲ್ಪ ಗ್ರಾಮ ಪಂಚಾಯತ್ ಬೀದಿಗುಡ್ಡೆ ಕಾಂಜಿ ಎಂಬಲ್ಲಿ ಇಂದು ನಡೆಯಿತು.

ಬಲ್ಪ, ಎಡಮಂಗಲ, ಸುಬ್ರಮಣ್ಯ ಕೃಷಿ ಸಖಿಯರ ಮುತುವರ್ಜಿಯಿಂದ ಕಡಬ ತಾಲ್ಲೂಕಿನ ಎಲ್ಲಾ ಕೃಷಿ ಸಖಿಯರು ಮತ್ತು ಪಶು ಸಖಿಯರು ಸ್ಥಳಿಯ ಮನೆಗಳ ಸದಸ್ಯರುಗಳು,ಒಕ್ಕೂಟಗಳ ಅಧ್ಯಕ್ಷರುಗಳು,ಸ್ವ ಸಹಾಯ ಗುಂಪುಗಳ ಸದಸ್ಯರುಗಳು ಸೇರಿಕೊಂಡು ಕೃಷಿ ಇಲಾಖೆ ಪಂಜ ಹೊಬಳಿ ಕೇಂದ್ರ,ಕಡಬ ತಾಲೂಕು ಪಂಚಾಯತ್ ಡೇ ಎನ್ ಆರ್ ಎಲ್ ಎಮ್ ಯೋಜನೆ ಗ್ರಾಮ ಪಂಚಾಯತ್ ಸಹಕಾರದೊಂದಿಗೆ 1.5 ಎಕರೆ ಗದ್ದೆಯಲ್ಲಿ ನೇಜಿ ನಾಟಿ ಮಾಡಿದರು.
ಈ ಸಂದರ್ಭದಲ್ಲಿ ಪುತ್ತೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಎಚ್ ಮಾತನಾಡಿ, ಸ್ವತಃ ಗದ್ದೆಯಲ್ಲಿ ನೇಜಿ ನಾಟಿ ಮಾಡುವುದರ ಮೂಲಕ ಭತ್ತ ಉತ್ಪಾದನೆ ಅವಶ್ಯಕತೆಯಿದ್ದು ಈಗಿನ ಪೀಳಿಗೆಗೆ ಮಕ್ಕಳಿಗೆ ಆಹಾರದ ಅವಶ್ಯಕತೆಯ ಬಗ್ಗೆ ಮಾದರಿ ಕೃಷಿ ಚಟುವಟಿಕೆಯಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಡಬದ ಕೃಷಿ ಸಖಿಯರು ಮಾಡುವ ಕೆಲಸಕ್ಕೆ ಪ್ರೋತ್ಸಾಹಿಸಿದರು. ಮುಂದಿನ ದಿನಗಳಲ್ಲಿ ಇಲಾಖೆಯ ಸೌಲಭ್ಯಗಳನ್ನು ಒದಗಿಸಲಾಗುವ ಬಗ್ಗೆ ಮಾಹಿತಿ ನೀಡಿದರು.
ಪುತ್ತೂರು ವಿಭಾಗ ಕೃಷಿ ಇಲಾಖೆ ಉಪ ನಿರ್ದೇಶಕ ಶಿವಶಂಕರ್ ಮಾತನಾಡಿ, ಇಂದಿನ ಕೃಷಿ ಅವಶ್ಯಕತೆ ಹಾಗೂ ರೈತರಿಗೆ ಕ್ಷೇತ್ರ ಮಟ್ಟದಲ್ಲಿ ರೈತರ ಪಾಠ ಶಾಲೆ ಚಟುವಟಿಕೆ ಮಾಡುವುದರ ಮೂಲಕ ಪ್ರಾತ್ಯಕ್ಷಿಕೆಯನ್ನು ನಡೆಸಲಾಗುವುದು. ಭತ್ತದ ಬೇಸಾಯಕ್ಕೆ ಬೇಕಾದ ಎಲ್ಲಾ ತಾಂತ್ರಿಕ ಬೆಂಬಲ ನೀಡುವ ಬಗ್ಗೆ ತಿಳಿಸಿದರು.
ಈ ಸಂಧರ್ಭದಲ್ಲಿ ಬಲ್ಪ ಗ್ರಾಮ ಪಂಚಾಯತ್ ಅಧ್ಯಕ್ಷ ಹರ್ಷಿತ್ ಕಾರ್ಜ, ಮಾಜಿ ಅಧ್ಯಕ್ಷೆ ಶಶಿಕಲಾ, ಎಡಮಂಗಲ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಣ್ಣ ಗೌಡ ಜಾಲ್ತರ್, ಗ್ರಾಮ ಪಂಚಾಯತ್ ಸದಸ್ಯರುಗಳು ಭಾಗವಹಿಸಿದ್ದರು. ಡೇ ಎನ್ ಎರ್ ಎಲ್ ಎಮ್ ಯೋಜನೆಯ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಜಗತ್ ಕೆ,ಕೃಷಿ ಚಟುವಟಿಕೆ ಬ್ಲಾಕ್ ಮ್ಯಾನೇಜರ್ ಮೋಹನ್, ತಾಲೂಕು ಸಂಪನ್ಮೂಲ ವ್ಯಕ್ತಿ ಧನ್ಯಶ್ರೀ, ರಮ್ಯ, ಪಂಜ ರೈತ ಸಂಪರ್ಕ ಕೇಂದ್ರ ಆತ್ಮ ಬ್ಲಾಕ್ ತಾಂತ್ರಿಕ ವ್ಯವಸ್ಥಾಪಕ ಸೀಮಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣ, ಪಂಚಾಯತ್ ಸಿಬ್ಬಂದಿಗಳು ಹಾಗೂ ಜಮೀನಿನ ಮಾಲಿಕ ಮಣಿಯಾಣಿ, ಆದರ್ಶ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಅಧ್ಯಕ್ಷರು, ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರ್ತಿ ಯಮುನಾ, ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿ, ಕೃಷಿ ಸಖಿ ಹೇಮಾ, ಪಶುಸಖಿ ಚಿತ್ರಾವತಿ ಸಹಕರಿಸಿದರು
























