ಶ್ರೀನಗರ: ಕಣಿವೊ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಅಪಾರ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಅಮರನಾಥ ಯಾತ್ರೆಯನ್ನು ಮುಂದಿನ ಆದೇಶದ ವರೆಗೆ ಮುಂದೂಡಲಾಗಿದೆ.
ಗಂಡೇರ್ಬಲ್ ಜಿಲ್ಲೆಯ ಬಲ್ಟಾನ್ ಮಾರ್ಗದಲ್ಲಿ ಬುಧವಾರ ಸಂಭವಿಸಿದ ಭೂ ಕುಸಿತದಿಂದ ಓರ್ವ ಮಹಿಳೆ ಸಾವನ್ನಪ್ಪಿದ್ದು, ಅನೇಕರಿಗೆ ಗಾಯಗಳಾಗಿರುವುದಾಗಿ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯ ಮುನ್ಸೂಚನೆ ಮೇರೆಗೆ ಅಮರನಾಥ ಯಾತ್ರೆಯನ್ನು ಮುಂದಿನ ಆದೇಶದವರೆಗೂ ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದ್ದು, ಅಮರನಾಥ ಯಾತ್ರಿಗಳ ಸುರಕ್ಷತೆಯ ದೃಷ್ಟಿಯಿಂದ ವಿಶೇಷ ಗಮನ ನೀಡಲಾಗುತ್ತಿದ್ದು, ಈ ದೃಷ್ಟಿಯಿಂದ ಭದ್ರತಾ ಪಡೆಗಳ ಜೊತೆಗೂಡಿ ಸುಗಮ ತೀರ್ಥಯಾತ್ರೆಗಾಗಿ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಆದರೆ ಮಳೆಯಿಂದಾಗಿ ಮತ್ತೆ ಭೂಕುಸಿತ ಉಂಟಾಗುವ ಭಯ ಇದ್ದು, ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಗುರುವಾರದಿಂದ ಯಾತ್ರೆಗೆ ಯಾವುದೇ ಗುಂಪು ಹೊರಡುವುದಿಲ್ಲ ಎಂದಿದ್ದಾರೆ.
























