ಕಾಂಬೋಡಿಯಾದ ಸೈಬರ್ ವಂಚಕರ ಹೊಸ ತಂತ್ರ
ಬೆಂಗಳೂರು: ಮುಂಬಯಿಯ ಎನ್ಕೌಂಟರ್ ಸ್ಪೆಷಲಿಸ್ಟ್ ಖ್ಯಾತಿಯ ಪೊಲೀಸ್ ಅಧಿಕಾರಿ ಕನ್ನಡಿಗ ದಯಾ ನಾಯಕ್
ಹೆಸರು ಹೇಳಿ ಚಿಕ್ಕಬಳ್ಳಾಪುರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿವೃತ್ತ ಭೂ ವಿಜ್ಞಾನಿಗೆ ಸೈಬರ್ ವಂಚಕರು ಲಕ್ಷಾಂತರ ಹಣ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಸಬ್ಬೇನಹಳ್ಳಿಯಲ್ಲಿ ಭೂ ವಿಜ್ಞಾನಿ ಬಿ.ಕೆ. ರಾಮಚಂದ್ರಪ್ಪ ಹಾಗೂ ಇವರ ಪತ್ನಿ ಸುಜಾತ ಅವರಿಗೆ ದಯಾ ನಾಯಕ್ ಹೆಸರಿನಲ್ಲಿ ಸೈಬರ್ ವಂಚಕರು ಕರೆ ಮಾಡಿದ್ದಾರೆ. ಮುಂಬೈಯ ಕೆನರಾ ಬ್ಯಾಂಕ್ನಲ್ಲಿ ನಿಮ್ಮ ಹೆಸರಿನ ಖಾತೆ ಇದೆ. ಕೆಲವರು ನಿಮ್ಮ ಖಾತೆಯನ್ನು ಮನಿ ಲಾಂಡರಿಂಗ್ಗೆ ಬಳಸಿಕೊಂಡಿದ್ದಾರೆ. ಇದರಿಂದ ನಿಮ್ಮ ವಿರುದ್ಧ ಆರೆಸ್ಟ್ ವಾರೆಂಟ್ ಜಾರಿಯಾಗಿದೆ. ನಿಮ್ಮ ಕೆನರಾ ಬ್ಯಾಂಕ್ ಖಾತೆಗೆ ಈ ಕೂಡಲೇ 12,65,000 ಹಣ ವರ್ಗಾವಣೆ ಮಾಡಿ, ಇಲ್ಲವಾದಲ್ಲಿ ನಿಮ್ಮ ಮನೆಯ ಮೇಲೆ ದಾಳಿ ಮಾಡಿ, ಬಂಧಿಸಬೇಕಾಗುತ್ತದೆ ಎಂದು ಹೆದರಿಸಿದ್ದಾರೆ.
ಸೈಬರ್ ವಂಚಕರ ಮಾತಿನಿಂದ ಹೆದರಿದ ಬಿ.ಕೆ. ರಾಮಚಂದ್ರಪ್ಪ ಹಾಗೂ ಅವರ ಪತ್ನಿ ಮನೆಯಲ್ಲಿದ್ದ 200 ಗ್ರಾಂ ಚಿನ್ನಾಭರಣಗಳನ್ನು ಮುತ್ತೂಟ್ ಫೈನಾನ್ಸ್ನಲ್ಲಿ ಅಡವಿಟ್ಟು ಬಂದ ಹಣವನ್ನು ವಂಚಕರು ಹೇಳಿದ ಕೆನರಾ ಬ್ಯಾಂಕ್ ಖಾತೆಗೆ ಆರ್ಟಿಜಿಎಸ್ ಮಾಡಿ ಮೋಸ ಹೋಗಿದ್ದಾರೆ. ಈಗ ನ್ಯಾಯಕ್ಕಾಗಿ ಚಿಕ್ಕಬಳ್ಳಾಪುರ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಚಿಕ್ಕಬಳ್ಳಾಪುರದ ಸೈಬರ್ ಠಾಣೆ ಪೊಲೀಸರು, ದೂರು ದಾಖಲು ಮಾಡಿಕೊಂಡು ತನಿಖೆ ನಡೆಸಿದರು. ಆರೋಪಿಗಳು ಕಾಂಬೋಡಿಯಾದಲ್ಲಿ ಕುಳಿತು ವಂಚನೆ ಮಾಡಿರುವುದು ಬೆಳಕಿಗೆ ಬಂದಿದ್ದು, ಮುಂಬೈಯ ಎನ್ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಅವರ ಹೆಸರನ್ನು ದುರುಪಯೋಗ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
























