ತಿರುವನಂತಪುರ: ಪತಿಯ ಮನೆಯವರ ಕಿರುಕುಳಕ್ಕೆ ಬೇಸತ್ತು ತನ್ನ ಒಂದೂವರೆ ವರ್ಷದ ಮಗುವನ್ನು ಕೊಂದ ಮಹಿಳೆ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಾರ್ಜಾದಲ್ಲಿ ನಡೆದಿದೆ.
ಮೃತರನ್ನು ಕೇರಳದ ತಿರುವನಂತಪುರ ಮೂಲದ ವಿಪಂಜಿಕಾ(32) ಮತ್ತು ವೈಭವಿ ಎಂದು ಗುರುತಿಸಲಾಗಿದೆ.
ಈ ಸಂಬಂಧ ವಿಪಂಜಿಕಾ ಅವರ ತಾಯಿ ಕೊಲ್ಲಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನ್ನ ಪುತ್ರಿಯನ್ನು ನಿಧೀಶ್ ಎಂಬಾತನಿಗೆ ವಿವಾಹ ಮಾಡಿಕೊಡಲಾಗಿದ್ದು ಅವರು ಶಾರ್ಜಾದಲ್ಲಿ ನೆಲೆಸಿದ್ದರು. ಪತಿ ಮತ್ತು ಆತನ ಮನೆಯವರು ನೀಡುತ್ತಿದ್ದ ಮಾನಸಿಕ, ದೈಹಿಕ ಕಿರುಕುಳ, ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಮೊಮ್ಮಗಳನ್ನು ಕೊಂದು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಆತ್ಮಹತ್ಯೆಗೂ ಮುನ್ನ ವಿಪಂಜಿಕಾ ಸಾಮಾಜಿಕ ಜಾಲತಾಣದಲ್ಲಿ ಡೆತ್ನೋಟ್ ಹಂಚಿಕೊಂಡಿದ್ದು, ಪತಿ ಮತ್ತು ಮಾವ ಕಿರುಕುಳ ನೀಡುತ್ತಿದ್ದುದಾಗಿ ಹೇಳಿದ್ದಾರೆ. ಮಾವ ತನ್ನ ಜೊತೆ ಕೆಟ್ಟ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದ. ನಿಧೀಶ್ ನಿಗೆ ವಿಪಂಜಿಕಾ ತನಗಿಂತ ಸೌಂದರ್ಯವತಿ ಎಂದು ಅಸೂಯೆ ಇದ್ದು, ಆಕೆಯ ತಲೆ ಬೋಳಿಸುವ ಕೆಲಸ ಮಾಡಿದ್ದ. ಪ್ರತಿನಿತ್ಯ ಇವರು ನನ್ನ ಮೇಲೆ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡುತ್ತಿದ್ದು, ನನಗೆ ಇದನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನನ್ನ ಮಗಳಿಗೂ ಹಿಂಸೆ ನೀಡುತ್ತಾರೆ ಎಂದು ಬರೆದುಕೊಂಡಿದ್ದಾರೆ.
ಮದುವೆ ಸಮಯದಲ್ಲಿ ಸಾಕಷ್ಟು ವರದಕ್ಷಿಣೆ ನೀಡಿದ್ದರೂ ಸಹ ಮತ್ತೆ ವರದಕ್ಷಿಣೆಗೆ ಪೀಡಿಸಲಾಗುತ್ತಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. ವಿಪಂಜಿಕಾ ಪತಿ ನಿಧೀಶ್, ಆತನ ಸಹೋದರಿ ನೀತು ಮತ್ತು ಅವರ ತಂದೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
























