ಬೆಂಗಳೂರು: ಪುತ್ತೂರಿನ ಜೊತೆಗೆ ಹತ್ತೂರನ್ನು ಬೆಚ್ಚಿ ಬೀಳಿಸಿದ್ದ ಕಲ್ಲೇಗ ಟೈಗರ್ಸ್ ಹುಲಿ ಕುಣಿತ ತಂಡದ ಅಕ್ಷಯ್ ಕಲ್ಲೇಗ ಕೊಲೆ ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ ಎರಡನೇ ಬಾರಿಯೂ ತಿರಸ್ಕರಿಸಿದೆ.
ಹಾಗೆಯೇ ಈ ಪ್ರಕರಣದ ವಿಚಾರಣೆಯನ್ನು ನಾಲ್ಕು ತಿಂಗಳುಗಳೊಳಗೆ ಪೂರ್ಣಗೊಳಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಕಟ್ಟುನಿಟ್ಟಾಗಿ ಗಡುವು ವಿಧಿಸಿದೆ.
ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ ಆರೋಪಿಗಳಾದ ಚೇತನ್, ಮನಿಶ್, ಕೇಶವ, ಮಂಜುನಾಥ್ ಅವರು ಎರಡನೇ ಬಾರಿಗೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ರದ್ದು ಮಾಡಿರುವುದಾಗಿದೆ.
ಮೃತ ಕುಟುಂಬದ ಪರ ನೇಮಕವಾದ ಸರ್ಕಾರಿ ಅಭಿಯೋಜರು ‘ಆರೋಪಿಗಳು ಪ್ರಭಾವಿಗಳಾಗಿದ್ದು, ಜಾಮೀನು ಸಿಕ್ಕರೆ ಅವರು ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಇದೆ’ ಎನ್ನುವುದನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿ ಸಮರ್ಥವಾಗಿ ವಾದ ಮಂಡಿಸಿದ್ದರು. ಈ ವಾದವನ್ನು ನ್ಯಾಯಾಲಯ ಪುರಸ್ಕರಿಸಿದೆ.
ಹಾಗೆಯೇ ಈ ಆರೋಪಿಗಳು ಜಾಮೀನಿಗಾಗಿ ಹೊಸದಾಗಿ ಅರ್ಜಿಯನ್ನು ಯಾವ ಕೋರ್ಟ್ನಲ್ಲಿಯೂ ಸಲ್ಲಿಸುವಂತಿಲ್ಲ ಎಂದು ಎಚ್ಚರಿಕೆ ನೀಡಿದೆ.
























