ಕೃತಕ ಬುದ್ಧಿಮತ್ತೆ ಮೂಲಕ ಕಾಲ್ಪನಿಕ ವಿಡಿಯೋ ಮಾಡಿದ ಯೂಟ್ಯೂಬರ್
ಬೆಳ್ತಂಗಡಿ : ಧರ್ಮಸ್ಥಳದ ವಿರುದ್ಧ ಇನ್ನೊಂದು ಸುತ್ತಿನ ಅಪಪ್ರಚಾರ ಬಿರುಸಿನಿಂದ ನಡೆಯುತ್ತಿದ್ದು, ಹಲವಾರು ಹೆಣಗಳನ್ನು ಹೂತು ಹಾಕಿದ್ದೇನೆ ಎಂದು ವ್ಯಕ್ತಿಯೊಬ್ಬ ಹೇಳಿಕೊಂಡ ಹಿನ್ನೆಲೆಯಲ್ಲಿ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಜಟಾಪಟಿ ಶುರುವಾಗಿದೆ. ಈ ವ್ಯಕ್ತಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ ಬಳಿಕ ಈ ದೂರಿನ ಬಗ್ಗೆ ಕಾಲ್ಪನಿಕವಾಗಿ ಕೃತಕ ಬುದ್ಧಿಮತ್ತೆ ಮೂಲಕ ಸೃಷ್ಟಿಸಲಾದ ಸುಳ್ಳು ಮಾಹಿತಿಗಳನ್ನು ಒಳಗೊಂಡಿರುವ ವಿಡಿಯೋ ಬಹಿರಂಗಪಡಿಸಿ ಸಾರ್ವಜನಿಕರು ಉದ್ರೇಕಗೊಳ್ಳುವಂತೆ ಮಾಡಿರುವ ಯುಟ್ಯೂಬರ್ ಸಮೀರ್ ಎಂ.ಡಿ ಎಂಬಾತನ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣದಲ್ಲಿ ಸಾಕ್ಷಿ ದೂರುದಾರ ತನ್ನ ದೂರಿನಲ್ಲಿ ಹಾಗೂ ನ್ಯಾಯಾಲಯದ ಮುಂದೆ ಬಹಿರಂಗಪಡಿಸಿರುವ ಮಾಹಿತಿಗಳನ್ನು ಹೊರತುಪಡಿಸಿ, ಸಾಕ್ಷಿ ದೂರುದಾರರ ಬಗ್ಗೆ ಹಾಗೂ ಪ್ರಕರಣದ ಬಗ್ಗೆ ಇತರ ಹೆಚ್ಚಿನ ಮಾಹಿತಿಗಳನ್ನು ಒಳಗೊಂಡಿರುವ ಕಾಲ್ಪನಿಕವಾಗಿ ಸೃಷ್ಟಿಸಲಾದ, ಸುಳ್ಳು ಮಾಹಿತಿಗಳನ್ನೊಳಗೊಂಡ ವಿಡಿಯೋವನ್ನು ಯೂಟ್ಯೂಬ್ ಚಾನೆಲ್ನಲ್ಲಿ ಪ್ರಸಾರ ಮಾಡಿ, ಉದ್ದೇಶಪೂರ್ವಕವಾಗಿ ಸಾರ್ವಜನಿಕರು ಉದ್ರೇಕಗೊಳ್ಳುವಂತೆ ಮಾಡಿರುವ ಹಿನ್ನೆಲೆಯಲ್ಲಿ ಸಮೀರ್ ಎಂ.ಡಿ ವಿರುದ್ದ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ : 42/2025 ಕಲಂ: 192, 240, 353(1)(b) bNS ರಂತೆ ಪ್ರಕರಣ ದಾಖಲಿಸಿರುವುದಾಗಿ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.
ಸಮೀರ್ ಎಂ.ಡಿ. ಈ ಹಿಂದೆಯೂ ಧರ್ಮಸ್ಥಳದ ವಿರುದ್ಧ ಇದೇ ರೀತಿಯ ವಿಡಿಯೋಗಳನ್ನು ಮಾಡಿ ಪ್ರಚಾರ ಪಡೆದುಕೊಂಡಿದ್ದ. ಅವನ ವಿರುದ್ಧ ನ್ಯಾಯಾಲಯಕ್ಕೆ ದೂರು ನೀಡಿದ ಬಳಿಕ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದು, ಈ ವಿಡಿಯೋಗಳನ್ನು ಆತ ಅಳಿಸಿ ಹಾಕಿದ್ದ. ಇದೀಗ ಮತ್ತೆ ಒಂದು ಕಾಲ್ಪನಿಕ ವಿಡಿಯೋ ಮಾಡಿ ಯೂಟ್ಯೂಬ್ಗೆ ಹಾಕಿ ಅಪಪ್ರಚಾರ ಮಾಡಿದ್ದಾನೆ.ಈ ವಿಡಿಯೋ ಕೂಡ 16 ಲಕ್ಷಕ್ಕೂ ಹೆಚ್ಚು ವ್ಯೂಗಳನ್ನು ಪಡೆದುಕೊಂಡಿದೆ.
























