ತ್ಯಾಜ್ಯ ತೈಲ ಘಟಕದಲ್ಲಿ ಸೋರಿಕೆಯಾದ ವಿಷಾನಿಲ
ಮಂಗಳೂರು: ಸುರತ್ಕಲ್ ಸಮೀಪವಿರುವ ಕೇಂದ್ರ ಸ್ವಾಮ್ಯದ ಎಂಆರ್ಪಿಎಲ್ನ ಒಂದು ಘಟಕದಲ್ಲಿ ಅನಿಲ ಸೋರಿಕೆಯಾಗಿ ಇಬ್ಬರು ಕಾರ್ಮಿಕರು ಮೃತಪಟ್ಟು, ಇನ್ನೊಬ್ಬ ಅಸ್ವಸ್ಥರಾದ ಘಟನೆ ಶನಿವಾರ ಬೆಳಗ್ಗೆ ಸಂಭವಿಸಿದೆ.
ಎಂಆರ್ಪಿಎಲ್ನ OM&S ತ್ಯಾಜ್ಯ ತೈಲ ಸಂಗ್ರಹ ಘಟಕದಲ್ಲಿ ಇಂದು ಬೆಳಗ್ಗೆ ಅನಿಲ ಸೋರಿಕೆಯಾಗಿದೆ. ಘಟಕದಲ್ಲಿ ಲೆವೆಲ್ ಪರಿಶೀಲನೆ ಮಾಡಲು ತೆರಳಿದ ಕಾರ್ಮಿಕ ವಾಪಸಾಗದೆ ಇರುವುದನ್ನು ನೋಡಿ ಇನ್ನಿಬ್ಬರು ಅಲ್ಲಿಗೆ ತೆರಳಿದ್ದಾರೆ. ಮೂವರೂ ಅಲ್ಲಿ ಅನಿಲ ಸೋರಿಕೆಯಿಂದ ಅಸ್ವಸ್ಥರಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ದಾರಿ ಮಧ್ಯೆ ಇಬ್ಬರು ಕಾರ್ಮಿಕರು ಕೊನೆಯುಸಿರೆಳೆದಿದ್ದಾರೆ. ಓರ್ವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಕೇರಳ ಮೂಲದ ಓರ್ವ ಮತ್ತು ಉತ್ತರ ಪ್ರದೇಶ ಮೂಲದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮತ್ತೋರ್ವ ಉತ್ತರ ಪ್ರದೇಶ ಮೂಲದ ಕಾರ್ಮಿಕ ಗಂಭೀರವಾಗಿದ್ದು, ಅವರನ್ನು ನಗರದ ಎಜೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಮೂರೂ ಕಾರ್ಮಿಕರು ಎಂಆರ್ ಪಿಎಲ್ OM&S ಘಟಕದ ಶೇಖರಣಾ ಪ್ರದೇಶದ ನಿರ್ವಹಣೆ ಕಾರ್ಮಿಕರಾಗಿದ್ದರು ಎನ್ನಲಾಗಿದೆ.
























