ಪುತ್ತೂರು: ಕಾರು ಖರೀದಿಸಲೆಂದು ಪರಿಚಯಸ್ಥನೊಂದಿಗೆ ಬಂದು ಮುಂಗಡ ಹಣ ನೀಡಿ ತಿಂಗಳ ಬಳಿಕ, ಕಾರು ಬುಕ್ಕಿಂಗ್ ಮಾಡಿದ್ದ ಮಹಿಳೆಯ ನಕಲು ಸಹಿ ಮಾಡಿ ಒಪ್ಪಿಗೆ ಪತ್ರವನ್ನು ಶೋ ರೂಮ್ ಗೆ ನೀಡಿ ಕಾರು ಖರೀದಿಸಿ ವಂಚನೆ ಮಾಡಿದ ಪ್ರರಣ ಬೆಳಕಿಗೆ ಬಂದಿದೆ. ವಂಚನೆ ಮಾಡಿದ ಆರೋಪಿ ಮತ್ತು ಶೋರೂಮ್ ಮ್ಯಾನೇಜರ್, ಸಂಸ್ಥೆಯ ಅಕೌಂಟೆಂಟ್, ಸೇಲ್ಸ್ ಎಕ್ಸಿಕ್ಯೂಟಿವ್ ಮತ್ತು ಆರೋಪಿಯಿಂದ ಕಾರು ಪಡೆದುಕೊಂಡ ಮಹಿಳೆಯ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಮರಮುಡೂರು ಗ್ರಾಮದ ಚೊಕ್ಕಾಡಿಯ ಕಾವ್ಯ ಎಮ್. , ತನ್ನ ತಂಗಿ ಪೂರ್ಣಿಮಾ, ತಮ್ಮ ಲಿಖಿತ್ ಹಾಗೂ ಪರಿಚಯಸ್ಥ ಬೆಂಗಳೂರು ನವಾಸಿ ಅನಿಲ್ ಕುಮಾರ್ನ ಜೊತೆ 2024ರ ಫೆ.29ರಂದು ಪುತ್ತೂರಿನ ಕಾರ್ ಶೋ ರೂಮ್ನಲ್ಲಿ ಬ್ರೆಝಾನಕಾರು ಬುಕ್ ಮಾಡಿದ್ದು, ಮುಂಗಡ ಹಣ ರೂ.1.50 ಲಕ್ಷವನ್ನು ಶೋ ರೂಮ್ ಸೇಲ್ಸ್ ಎಕ್ಸಿಕ್ಯೂಟಿವ್ ಪೃಥ್ವಿ ಅವರಿಗೆ ನೀಡಿದ್ದರು.
ಕಾರಿನ ಮುಂಗಡ ಹಣದಲ್ಲಿ ಉಳಿದ 40 ಸಾವಿರವನ್ನು 2024ರ ಮಾ.5ಕ್ಕೆ ಯುಪಿಐ ಮೂಲಕ ಪಾವತಿಸಿದ್ದು, ನಂತರ ಕಾವ್ಯ ಅವರಿಗೆ ಕಾರು ಖರೀದಿಸಲು ಅಸಾಧ್ಯವಾದಾಗ ಸ್ವಲ್ಪ ಕಾಲಾವಕಾಶ ಕೇಳಿ ಮುಂಗಡ ಹಣ ನಿಮ್ಮಲಿರಲಿ ಎಂದು ಪೃಥ್ವಿರವರಿಗೆ ತಿಳಿಸಿದ್ದರು. ನಂತರ ಅಗಸ್ಟ್ ನಲ್ಲಿ ಪೃಥ್ವಿಗೆ ಕರೆ ಮಾಡಿ ಕಾರು ಖರೀದಿಸುವಂತೆ ಹೇಳಿದಾಗ, ಅನಿಲ್ ಎಂಬವರು ನಿಮ್ಮ ಸಹಿಯ ಒಪ್ಪಿಗೆ ಪತ್ರ ಕೊಟ್ಟು ಕಾರು ಖರೀದಿಸಿರುವುದಾಗಿ ಪೃಥ್ವಿ ತಿಳಿಸಿದ್ದಾರೆ. ಈ ಬಗ್ಗೆ ಶೋರೂಮ್ ನಲ್ಲಿ ವಿಚಾರಿಸಿದಾಗ, ಅನಿಲ್ ಕಾವ್ಯ ನೀಡಿದ್ದ ಮುಂಗಡ ಹಣ ಹೊಂದಾಣಿಕೆ ಮಾಡಿ ಕಾರು ಖರೀದಿಸಿ ಹೇಮ ಎಂಬಾಕೆಗೆ ನೀಡಿದ ವಿಚಾರ ಬೆಳಕಿಗೆ ಬಂದಿದೆ. ಈ ವಿಚಾರವಾಗಿ ಜು.10ರಂದು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
























