ಹಲಾಲ ರೂಪದಲ್ಲಿ ನೇಪಾಳದ ಮೂಲಕ ಹಣ ಮತಾಂತರಕ್ಕೆ ಬಳಕೆ
ಲಕ್ನೋ: ಜನರನ್ನು ಅಕ್ರಮವಾಗಿ ಮತಾಂತರ ಮಾಡುವುದು, ದೇಶದ್ರೋಹದ ಆರೋಪದಲ್ಲಿ ಉತ್ತರಪ್ರದೇಶದಲ್ಲಿ ಎಟಿಎಸ್ ಅಧಿಕಾರಿಗಳ ಬಲೆಗೆ ಬಿದ್ದಿರುವ ಸ್ವಯಂಘೋಷಿತ ಬಾಬ ಛಂಗುರ್ಗೆ ಸಂಬಂಧಿಸಿದ ಹಾಗೆ ಮತ್ತಷ್ಟು ಆಘಾತಕಾರಿ ಸುದ್ದಿಗಳು ಬೆಳಕಿಗೆ ಬಂದಿದೆ.
ಆರೋಪಿ ಛಂಗುರ್ ಕಳೆದ ಮೂರು ವರ್ಷಗಳಲ್ಲಿ 500 ಕೋಟಿ ರೂ. ವಿದೇಶಿ ದೇಣಿಗೆ ಪಡೆದಿರುವುದಾಗಿ ಎಟಿಎಸ್ ಅಧಿಕಾರಿಗಳು ತಿಳಿಸಿದ್ದು, ಇದರಲ್ಲಿ 200 ಕೋಟಿ ರೂ. ಅಧಿಕೃತ ಮೂಲದ್ದು ಎಂದು ದೃಢೀಕರಿಸಲಾಗಿದೆ. ಉಳಿದ ಮೊತ್ತವನ್ನು ನೇಪಾಳದ ಮೂಲಕ ಹಲಾಲ ರೂಪದಲ್ಲಿ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ನೇಪಾಳದ ಗಡಿಗಳಲ್ಲಿನ ಬ್ಯಾಂಕ್ಗಳಲ್ಲಿ ಖಾತೆ ತೆರದು ಹಲಾಲ ಹಣ ವರ್ಗಾವಣೆ ನಡೆಸಲಾಗಿದೆ. ಭಾರತದಲ್ಲಿ ಧಾರ್ಮಿಕ ಮತಾಂತರ ನಡೆಸಲು ಈ ಹಣವನ್ನು ಬಳಸಲಾಗುತ್ತಿತ್ತು. ಈ ಖಾತೆಗಳಿಗೆ ಪಾಕ್, ದುಬೈ, ಟರ್ಕಿ ಸೇರಿದಂತೆ ಇನ್ನೂ ಹಲವು ರಾಷ್ಟ್ರಗಳಿಂದ ಹಣ ವರ್ಗಾವಣೆ ಆಗುತ್ತಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಾಬಾನ ನೇಪಾಳದ ಏಜೆಂಟ್ಗಳು ಹಣ ವರ್ಗಾವಣೆ ಕಾರ್ಯದಲ್ಲಿ ಛಂಗೂರ್ನಿಗೆ ನೆರವಾಗಿದ್ದಾರೆ. ಅಲ್ಲಿನ ಸ್ಥಳೀಯರು ಈ ಹಣವನ್ನು ಭಾರತೀಯ ಕರೆನ್ಲಿಗೆ ವರ್ಗಾಯಿಸಲು ಸಹಾಯ ಮಾಡಿದ್ದಾರೆ. ಬಿಹಾರ ಜಿಲ್ಲೆಗಳಾದ ಮಧುಬನಿ, ಸೀತಾಮರ್ಹಿ, ಪೂರ್ಣಿಯಾ, ಕಿಶನ್ಗಂಜ್, ಚಂಪಾರಣ್ ಮತ್ತು ಸುಪೌಲ್ಗಳ ಏಜೆಂಟ್ಗಳು ನೇಪಾಳದಿಂದ ಬಾಬಾನ ಹಣವನ್ನು ಕಳ್ಳಸಾಗಣೆ ಮಾಡುವ ಹಗರಣದಲ್ಲಿ ನೆರವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಯೋಧ್ಯಾ ಜಿಲ್ಲೆಗೆ ಅತಿ ಹೆಚ್ಚು ಹಣ ವರ್ಗಾವಣೆ ಆಗಿದ್ದು, ಇಲ್ಲಿನ ಹಿಂದೂ ಯುವತಿಯರನ್ನು ಮತಾಂತರ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಛಂಗೂರ್ ಬಾಬಾನಿಗೆ ಮತ್ತು ಅವನ ಚೇಲಾಗಳಿಗೆ ಸಂಬಂಧಿಸಿದ 40 ಬ್ಯಾಂಕ್ ಖಾತೆಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಛಂಗೂರ್ನಿಗೆ ಸೇರಿದ ಅಕ್ರಮ ಕಟ್ಟಡಗಳನ್ನು ಕೆಲದಿನಗಳ ಹಿಂದೆಯೇ ಪೊಲೀಸರು ಬುಲ್ಡೋಸರ್ ಬಳಸಿ ಕೆಡವಿದ್ದರು.
























