ಯೋಗೇಶ್ವರ್ ನಮಗೆ ಹಿಂಸೆ ನೀಡುತ್ತಿದ್ದಾರೆ ಎಂದು ಅಳಲು
ಬೆಂಗಳೂರು: ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ಕಾಂಗ್ರೆಸ್ ಶಾಸಕ ಸಿ.ಪಿ. ಯೋಗೇಶ್ವರ್ ವಿರುದ್ಧ ಅವರ ಮಾಜಿ ಪತ್ನಿ ಮತ್ತು ಪುತ್ರಿ ದೂರು ಸಲ್ಲಿಸಿದ್ದಾರೆ.
ಕಾಂಗ್ರೆಸ್ನ ಒನ್ ಟು ಒನ್ ಮ್ಯಾರಥಾನ್ ಸಭೆಯಲ್ಲಿ ಅಸಮಾಧಾನಿತ ಕಾಂಗ್ರೆಸ್ ಶಾಸಕರು ಸುರ್ಜೇವಾಲಾ ಬಳಿ ತಮ್ಮ ಅಸಮಾಧಾನ ಹೊರಹಾಕುತ್ತಿದ್ದು, ಇದೇ ವೇದಿಕೆಯಲ್ಲಿ ಯೋಗೇಶ್ವರ್ ವಿರುದ್ಧ ಮಾಜಿ ಪತ್ನಿ ಮತ್ತು ಪುತ್ರಿ ತಮ್ಮ ಸಂಕಷ್ಟ ತೋಡಿಕೊಂಡಿರುವುದಾಗಿದೆ.
ಯೋಗೇಶ್ವರ್ ಅವರ ವಿಚ್ಛೇದಿತ ಪತ್ನಿ ಮಾಳವಿಕ ಸೋಳಂಕಿ ಮತ್ತು ನಿಶಾ ಅವರು ಸುರ್ಜೇವಾಲಾ ಅವರನ್ನು ಭೇಟಿ ಮಾಡಿ, ‘ಯೋಗೇಶ್ವರ್ ಅವರು ನಮಗೆ ಹಿಂಸೆ ನೀಡುತ್ತಿದ್ದಾರೆ. ನಮ್ಮಷ್ಟಕ್ಕೆ ನಾವಿದ್ದರೂ ನಮ್ಮ ಮೇಲೆ ಪ್ರಕರಣ ದಾಖಲಿಸಿ ಹಿಂಸೆ ನೀಡುವುದು, ಮಾನಸಿಕ ಹಿಂಸೆ ನೀಡುವುದು ಮಾಡುತ್ತಿದ್ದಾರೆ. ಅವರಿಗೆ ನಮ್ಮಲ್ಲಿ ಏನಂತಹಾ ದ್ವೇಷ ಎಂದು ಗೊತ್ತಾಗುತ್ತಿಲ್ಲ .ದಯವಿಟ್ಟು ಈ ಸಂಕಷ್ಟದಿಂದ ನಮಗೆ ಮುಕ್ತಿ ನೀಡಬೇಕು’ ಎಂದು ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಸುರ್ಜೇವಾಲಾ ಅವರು ಸಿ.ಎಂ., ಡಿ.ಸಿ.ಎಂ. ಜೊತೆಗೆ ಚರ್ಚೆ ನಡೆಸುವ ಭರವಸೆ ನೀಡಿದ್ದಾಗಿ ನಿಶಾ ಮಾಹಿತಿ ನೀಡಿದ್ದಾರೆ. ಹಾಗೆಯೇ ಯೋಗೇಶ್ವರ್ ಅವರು ನಮ್ಮನ್ನು ಬೀದಿ ಪಾಲು ಮಾಡಿದ್ದು, ನಮ್ಮ ಜೀವನವನ್ನು ಕತ್ತಲು ಮಾಡಿದ್ದಾರೆ. ಅವರಿಂದ ವಿಚ್ಛೇದನ ಪಡೆದ ಬಳಿಕ ನಮ್ಮ ಪಾಡಿಗೆ ನಾವು ಇದ್ದೇವೆ. ಆದರೂ ನಮ್ಮ ಮೇಲೆ ಕೇಸು ಹಾಕುತ್ತಾರೆ. ನಮ್ಮ ಮೇಲೆ ಅವರಿಗೆ ಏನು ದ್ವೇಷವೋ ಗೊತ್ತಿಲ್ಲ. ಇದರಿಂದಾಗಿಯೇ ನಾವು ಸುರ್ಜೇವಾಲಾ ಅವರನ್ನು ಭೇಟಿ ಮಾಡಿ ಸಮಸ್ಯೆ ಹೇಳಿದ್ದೇವೆ. ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಹೇಳಿದ್ದಾರೆ.
























