ಬೆಂಗಳೂರು: ಅನ್ನಭಾಗ್ಯ ಯೋಜನೆಯ ಪಡಿತರ ಸಾಗಾಟ ಲಾರಿಗಳಿಗೆ ನೀಡಲು ಬಾಕಿ ಇದ್ದ 244 ಕೋಟಿ ರೂ. ಮೊತ್ತವನ್ನು ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕಳೆದ ಐದಾರು ತಿಂಗಳುಗಳಿಂದ ಅನ್ನಭಾಗ್ಯ ಪಡಿತರ ಸಾಗಾಟ ವಾಹನಗಳಿಗೆ ನೀಡಬೇಕಾಗಿದ್ದ ಹಣವನ್ನು ಪಾವತಿ ಮಾಡದ ಸರ್ಕಾರದ ನಡೆಗೆ ಪ್ರತಿಭಟನೆಯ ಬಿಸಿ ಮುಟ್ಚಿಸಲು ಲಾರಿ ಚಾಲಕ ಮಾಲಕರು ಮುಂದಾಗಿದ್ದರು. ಇದರಿಂದ ಎಚ್ಚೆತ್ತುಕೊಂಡ ಸರ್ಕಾರ ಬಾಕಿ ಇದ್ದ ಹಣವನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಿರುವುದಾಗಿದೆ.
ಸರ್ಕಾರ ಹಣ ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಲಾರಿ ಮುಷ್ಕರ ಹಿಂದೆಗೆದುಕೊಳ್ಳಲಾಗಿದೆ. ಲಾರಿ ಚಾಲಕ ಮಾಲೀಕರ ಮುಷ್ಕರಕ್ಕೆ ಮಂಡಿಯೂರಿದ ಸರ್ಕಾರ ಕಳೆದ ಫೆಬ್ರವರಿಯಿಂದ ಮೇ ತಿಂಗಳ ವರೆಗಿನ ಬಾಕಿ ಹಣವನ್ನು ಬಿಡುಗಡೆ ಮಾಡಿದೆ ಎಂದು ತಿಳಿದು ಬಂದಿದೆ.
























