ಕೋಮು ಸಂಘರ್ಷ ನಿಗ್ರಹ ಪಡೆಯಿಂದ ಕಾರ್ಕಳದ ಯುವಕನ ಬಂಧನ
ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಕೋಮು ಸಂಘರ್ಷವನ್ನು ತಡೆಗಟ್ಟಲು ರಚಿಸಿರುವ ಸ್ಪೆಷಲ್ ಆ್ಯಕ್ಷನ್ ಫೋರ್ಸ್ ಸೋಶಿಯಲ್ ಮೀಡಿಯಾದಲ್ಲಿ ಪ್ರಚೋದನಾಕಾರಿ ಪೋಸ್ಟ್ ಹಾಕುವವರ ಬೆನ್ನು ಬಿದ್ದಿದ್ದು, ರಕ್ತಕ್ಕೆ ರಕ್ತವೇ ಬೇಕು ಎಂದು ಸ್ಟೇಟಸ್ ಹಾಕಿದ ಕಾರ್ಕಳದ ಯುವಕನೊಬ್ಬನನ್ನು ಬಂಧಿಸಿದೆ.
ಕಾರ್ಕಳ ಇರ್ವತ್ತೂರು ಗ್ರಾಮದ ಆಶಿಕ್ ಎಸ್ ಕೋಟ್ಯಾನ್ ಸೆರೆಯಾದ ಯುವಕ. ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ʼನಮಗೆ ಯಾವುದೇ ರೀತಿಯ ಉತ್ತರಗಳು ಬೇಡ ರಕ್ತಕ್ಕೆ ರಕ್ತವೇ ಉತ್ತರವಾಗಬೇಕು, ಜೀವಕ್ಕೆ ಜೀವವೇ ಬೇಕುʼ ಎಂದು ಈತ ಮಾರಕಾಯುಧಗಳ ಚಿಹ್ನೆ ಬಳಸಿ ಪ್ರಚೋದನಕಾರಿ ಸ್ಟೇಟಸ್ ಹಾಕಿಕೊಂಡಿದ್ದ.
ಇದನ್ನು ಪ್ರಚೋದನಕಾರಿ ಪೋಸ್ಟ್ ಎಂದು ಪರಿಗಣಿಸಿ ಮಂಗಳೂರಿನ ಸ್ಪೆಷಲ್ ಆ್ಯಕ್ಷನ್ ಫೋರ್ಸ್ ತಂಡದ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ BNS ಕಲಂ.196, 353(2),351(3)ಯಡಿ ಎಫ್ಐಆರ್ ದಾಖಲಾಗಿದೆ.
ಕೋಮು ಸಂಘರ್ಷ ನಿಗ್ರಹಕ್ಕೆ ಮಾಡಿರುವ ಸ್ಪೆಷಲ್ ಆ್ಯಕ್ಷನ್ ಫೋರ್ಸ್ಗೆ ಇತ್ತೀಚೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಂಗಳೂರಿನಲ್ಲಿ ಚಾಲನೆ ನೀಡಿದ್ದರು. ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ ಈ ಸ್ಪೆಷಲ್ ಆ್ಯಕ್ಷನ್ ಫೋರ್ಸ್ ಕಾರ್ಯಾಚರಣೆ ನಡೆಸುತ್ತಿದೆ.
























