ಪುತ್ತೂರು: ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ಮಾಸ್ಟರ್ ಮೈಂಡ್ ಎಂಟರ್ಪ್ರೈಸಸ್ ಸಹಭಾಗಿತ್ವದಲ್ಲಿ ಪದವಿ ಹಾಗೂ ಪದವಿ ಪೂರ್ವ ಕಾಲೇಜಿನ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರಿಗೆ ಒಂದು ದಿನದ “ಅಧ್ಯಾಪಕರ ತರಬೇತಿ ಕಾರ್ಯಗಾರ” ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಕಾರ್ಯಗಾರವನ್ನು ಕಾಲೇಜಿನ ಅಧ್ಯಕ್ಷ ಜಯಂತ ನಡುಬೈಲು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿ, ಅಧ್ಯಾಪಕರ ವ್ಯಕ್ತಿತ್ವ ವಿಕಸನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದು ಕಳೆದ ಮೂರು ವರ್ಷಗಳಿಂದ ಸತತವಾಗಿ ಇಂತಹ ಕಾರ್ಯಗಾರವನ್ನು ನಡೆಸುತ್ತಾ ಬಂದಿರುತ್ತದೆ ಹಾಗೂ ಇದರ ಸದುಪಯೋಗವನ್ನು ಪ್ರತಿಯೊಬ್ಬ ಸಿಬ್ಬಂದಿಯು ಪಡೆದುಕೊಳ್ಳಬೇಕು ಎಂದು ಹಾರೈಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಮಾಸ್ಟರ್ ಮೈಂಡ್ ಎಂಟರ್ಪ್ರೈಸಸ್ ಮಾಲಕ ಶ್ರೀಶ ಕೆ ಎಂ, ಒಂದು ಸಂಸ್ಥೆಯ ಸರ್ವತೋಮುಖ ಬೆಳವಣಿಗೆಗೆ ಅಲ್ಲಿ ಕೆಲಸ ನಿರ್ವಹಿಸುತ್ತಿರುವ ಪ್ರತಿಯೊಬ್ಬ ಉದ್ಯೋಗಿಯ ಸಹಕಾರ ಬಹಳ ಪ್ರಾಮುಖ್ಯತೆ ಪಡೆದಿರುತ್ತದೆ ಹಾಗೂ ಉದ್ಯೋಗಿಯು ತನ್ನಲ್ಲಿ ಅಳವಡಿಸಿಕೊಳ್ಳಬೇಕಾದ ಶ್ರದ್ದೆ, ಸಮಯ ಪಾಲನೆ, ನಡವಳಿಕೆ, ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ರೀತಿ, ವೃತ್ತಿಯಲ್ಲಿ ಚಾಣಾಕ್ಷತನ ಹೀಗೆ ಒಬ್ಬ ಉತ್ತಮ ಶಿಕ್ಷಕ ಎನಿಸಿಕೊಳ್ಳಲು ಶಿಕ್ಷಕನಲ್ಲಿ ಇರಬೇಕಾದ ಅರ್ಹತೆಗಳನ್ನು, ಚಟುವಟಿಕೆಯ ಮೂಲಕ ನಡೆಸಿದರು.
ಕಾಲೇಜಿನ ಸುಮಾರು 45 ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಈ ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದರು.
ವೇದಿಕೆಯಲ್ಲಿ ಮಾಸ್ಟರ್ ಮೈಂಡ್ ಎಂಟರ್ಪ್ರೈಸಸ್ ಪಾಲುದಾರ ವನಮಾಲಿ ಹೆಬ್ಬಾರ್, ಕಾಲೇಜಿನ ಆಡಳಿತಾಧಿಕಾರಿ ಅರ್ಪಿತ್ ಟಿ. ಎ., ಉಪ ಪ್ರಾಂಶುಪಾಲ ಶ್ರೀ ರಕ್ಷಣಾ ಟಿ ಆರ್ ಉಪಸ್ಥಿತರಿದ್ದರು.
ಪದವಿ ಕಾಲೇಜಿನ ಪ್ರಾಂಶುಪಾಲ ಸಂಪತ್ ಕೆ. ಪಕ್ಕಳ ಸ್ವಾಗತಿಸಿ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕುಮಾರಿ ಗಂಗರತ್ನ ವಂದಿಸಿದರು. ಗ್ರಂಥಪಾಲಕಿ ಪ್ರಭಾವತಿ ಪ್ರಾರ್ಥಿಸಿದರು. ಆಂಗ್ಲ ಭಾಷಾ ವಿಭಾಗ ಮುಖ್ಯಸ್ಥೆ ಹಾಗೂ ಐಕ್ಯೂಎಸಿ ಸಂಯೋಜಕಿ ರಶ್ಮಿ ಕೆ ಕಾರ್ಯಕ್ರಮ ನಿರೂಪಿಸಿದರು.
























