ಕಾರಿಗೆ ಕ್ಯಾಂಟರ್ ಲಾರಿ ಡಿಕ್ಕಿ ಹೊಡೆದು ಸಂಭವಿಸಿದ ದುರಂತ
ಬೆಂಗಳೂರು: ತುಮಕೂರು ಜಿಲ್ಲೆಯ ಕುಣಿಗಲ್ ಬೈಪಾಸ್ನಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಕ್ಯಾಂಟರ್ ಲಾರಿ ಕಾರಿಗೆ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಪತಿ, ಪತ್ನಿ, ಮಗ, ಮಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಿಬೇಗೌಡ (48), ಶೋಭಾ (42), ದುಂಬಿಶ್ರೀ (16) ಮತ್ತು ಭಾನು ಕಿರಣ್ ಗೌಡ (14) ಮೃತ ದುರ್ದೈವಿಗಳು.
ಇವರು ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಯಲಗಲವಾಡಿ ಹ್ಯಾಂಡ್ ಪೊಸ್ಟ್ನವರು ಎಂದು ತಿಳಿದುಬಂದಿದೆ. ಯುಟರ್ನ್ ತೆಗೆದುಕೊಳ್ಳುವಾಗ ಕಾರಿಗೆ ಕ್ಯಾಂಟರ್ ಡಿಕ್ಕಿಯಾಗಿದೆ. ಸ್ಥಳಕ್ಕೆ ಕುಣಿಗಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಣಿಗಲ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮೃತ ಸಿಬೇಗೌಡ ಅವರು ಕುಟುಂಬ ಸಮೇತ ಮಾಗಡಿ ಪಟ್ಟಣದಲ್ಲಿ ವಾಸವಾಗಿದ್ದರು. ಸಿಬೇಗೌಡ ಅವರಿಗೆ ಇಬ್ಬರು ಹೆಣ್ಣು ಮಕ್ಕಳು, ಹಾಗೂ ಒಬ್ಬ ಗಂಡು ಮಗ ಇದ್ದನು. ಹಿರಿಯ ಮಗಳಿಗೆ ಮದುವೆ ಮಾಡಲಾಗಿದೆ. ಭಾನುವಾರ ಅರವಿಂದ್ನನ್ನು ಶಾಲೆಯ ವಸತಿ ನಿಲಯಕ್ಕೆ ಬಿಟ್ಟು ಬರಲು ಸಿದ್ದೇಗೌಡ ಅವರು ಒಂದೇ ಕಾರಿನಲ್ಲಿ ಕುಟುಂಬ ಸಮೇತ ಬಂದಿದ್ದರು. ಕುಣಿಗಲ್ ಬೈಪಾಸ್ನಲ್ಲಿರುವ ಉಗಿಬಂಡಿ ರೆಸ್ಟೋರೆಂಟ್ ಬಳಿ ಕಾರನ್ನು ಯುಟರ್ನ್ ತೆಗೆದುಕೊಳ್ಳುವಾಗ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾತ್ರಿ 8:30 ಸುಮಾರಿಗೆ ಘಟನೆ ನಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಪೂರ್ತಿಯಾಗಿ ಜಖಂಗೊಂಡಿದೆ.
























