ಪುತ್ತೂರು: ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಮರಾಟಿ ಮಹಿಳಾ ವೇದಿಕೆ ಹಾಗೂ ಯುವ ವೇದಿಕೆ ಸಹಭಾಗಿತ್ವದಲ್ಲಿ ವಧು-ವರಾನ್ವೇಷಣಾ ಸಮಾವೇಶ-2025 ಜು.13 ಭಾನುವಾರ ಕೊಂಬೆಟ್ಟು ಮರಾಟಿ ಸಮಾಜ ಮಂದಿರದಲ್ಲಿ ನಡೆಯಲಿದೆ ಎಂದು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಎನ್.ದುಗ್ಗಪ್ಪ ನಾಯ್ಕ ಬಡಾವು ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಸಂಘ ಸ್ವಜಾತಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಾರ್ಷಿಕ ಕ್ರೀಡಾಕೂಟ, ಧಾರ್ಮಿಕ ಕಾರ್ಯಕ್ರಮಗಳು, ಪ್ರಾಕೃತಿಕ ವಿಕೋಪ ಪೀಡಿತರು, ಅನಾರೋಗ್ಯ ಪೀಡಿತರಿಗೆ ನಗದು ರೂಪದಲ್ಲಿ ಧನಸಹಾಯ ನೀಡು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಇದೀಗ ಚೊಚ್ಚಲ ವಧು-ವರಾನ್ವೇಷಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇತ್ತೀಚಿನ ದಿನಗಳಲ್ಲಿ ಯುವಕ-ಯುವತಿಯರು ದೂರದ ಪಟ್ಟಣಗಳಿಗೆ ಉದ್ಯೋಗಸ್ಥರಾಗಿ ಅಥವಾ ಸ್ವ ಉದ್ಯೋಗ ಮುನ್ನಡೆಸಿಕೊಂಡು ಹೋಗುತ್ತಿದ್ದು,. ಅಂತವರಿಗೆ ತ್ವರಿತಗತಿಯಲ್ಲಿ ಕಂಕಣಭಾಗ್ಯದ ಅವಕಾಶ ಹೊಂದುವವರು ತಮ್ಮ ಹೆತ್ತವರ, ಪೋಷಕರ ಸಮ್ಮುಖದಲ್ಲಿ ಯುವಕ-ಯುವತಿಯರನ್ನು ಮುಖಾಮುಖಿಯಾಗಿ ವಿಚಾರ ವಿನಿಮಯದೊಂದಿಗೆ ವಿವಾಹ ಬಂಧನಕ್ಕೆ ಅವಕಾಶ ಒದಗಿಸಲಾಗುತ್ತದೆ ಎಂದು ತಿಳಿಸಿದರು.
ಬೆಳಗ್ಗೆ ಸಮಾರಂಭವನ್ನು ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷ, ಜಿಲ್ಲಾ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಕೆ.ಸುಂದರ ನಾಯ್ಕ ಉದ್ಘಾಟಿಸಲಿದ್ದು, ಪುತ್ತೂರು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಎನ್.ದುಗ್ಗಪ್ಪ ನಾಯ್ಕ ಬಡಾವು ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಶಶಿಪ್ರಭಾ ಹೆಚ್., ಮಂಗಳೂರು ಅಶ್ವಿನ್ ವಾರ್ ಮತ್ತು ಕಂಪೆನಿಯ ಸೀನಿಯರ್ ಮ್ಯಾನೇಜರ್ ಮಹಾಲಿಂಗ ನಾಯ್ಕ ಹೆಚ್., ಬೆಳ್ತಂಗಡಿ ಸಂಘದ ಅಧ್ಯಕ್ಷ ಸತೀಶ್ ನಾಯ್ಕ, ಸುಳ್ಯ ಸಂಘದ ಅಧ್ಯಕ್ಷ ಬಾಲಕೃಷ್ಣ ನಾಯ್ಕ, ಬಂಟ್ವಾಳ ಸಂಘದ ಅಧ್ಯಕ್ಷ ನಾರಾಯಣ ನಾಯ್ಕ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಶೀನಪ್ಪ ನಾಯ್ಕ ಎಸ್. ನೆಲ್ಯಾಡಿ, ಮರಾಟಿ ಯುವ ವೇದಿಕೆ ಅಧ್ಯಕ್ಷ ವಸಂತ ನಾಯ್ಕ ಆರ್ಯಾಪು, ಸಂಚಾಲಕ ಪೂವಪ್ಪ ನಾಯ್ಕ ಕುಂಞಿಕುಮೇರು, ಮಹಿಳಾ ಸಂಘದ ಮೀನಾಕ್ಷಿ ಮಂಜುನಾಥ ನಾಯ್ಕ ಉಪಸ್ಥಿತರಿದ್ದರು.
























