ಇಬ್ಬರಿಗೆ ಗಂಭೀರ ಗಾಯ; 12 ಮಂದಿ ಪಾರು
ತೃಶ್ಶೂರು: ಕೇರಳದ ತೃಶ್ಶೂರ್ ಜಿಲ್ಲೆಯ ಕೊಡಕರ ಪಟ್ಟಣದಲ್ಲಿ 40 ವರ್ಷ ಹಳೆಯ ಎರಡು ಅಂತಸ್ತಿನ ಕಟ್ಟಡ ಕುಸಿದು ಮೂವರು ವಲಸೆ ಕಾರ್ಮಿಕರು ದುರ್ಮರಣ ಹೊಂದಿರುವ ದುರ್ಘಟನೆ ಇಂದು ಬೆಳಗ್ಗೆ ಸಂಭವಿಸಿದೆ. ಮೃತರನ್ನು ಪಶ್ಚಿಮ ಬಂಗಾಳ ಮೂಲದ ರೂಪೆಲ್, ರಾಹುಲ್ ಮತ್ತು ಅಲಿಮ್ ಎಂದು ಗುರುತಿಸಲಾಗಿದೆ. ಅವಶೇಷಗಳಿಂದ ಅವರ ಶವಗಳನ್ನು ಹೊರತೆಗೆದುಕೊಳ್ಳಲಾಗಿದೆ.
ಕಟ್ಟಡವು ಕೆಂಪುಕಲ್ಲಿನಿಂದ ನಿರ್ಮಿತವಾಗಿದ್ದು, ಕಳೆದ ಕೆಲ ದಿನಗಳಿಂದ ಸುರಿದ ಭಾರಿ ಮಳೆಗೆ ಪೂರ್ಣವಾಗಿ ಕುಸಿದಿದೆ. ಈ ಕಟ್ಟಡದಲ್ಲಿ ಸುಮಾರು 17 ಮಂದಿ ವಾಸಿಸುತ್ತಿದ್ದರು. ಅಪಘಾತ ಸಂಭವಿಸಿದ ವೇಳೆ ಬಹುತೇಕರು ಬೆಳಗ್ಗೆ ಕೆಲಸಕ್ಕೆ ತೆರಳುತ್ತಿದ್ದ ಸಮಯವಾಗಿತ್ತು. ಉಳಿದವರು ಹೊರ ಓಡಿಬಂದು ಪ್ರಾಣ ರಕ್ಷಿಸಿಕೊಂಡಿದ್ದಾರೆ.
ಕಾರ್ಮಿಕರನ್ನು ನೇಮಿಸಿದ್ದ ಗುತ್ತಿಗೆದಾರನ ಪ್ರಕಾರ ಕಟ್ಟಡದಲ್ಲಿ 10 ಮಂದಿ ಮಾತ್ರ ವಾಸಿಸುತ್ತಿದ್ದರು. ಆದರೆ ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ 17 ಮಂದಿ ಇದ್ದರೆಂದು ತಿಳಿಸಿದ್ದಾರೆ. ಕೊಡಕರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಜೀಶ್ ಕೆ.ಜಿ. ಸೌತ್ ಫಸ್ಟ್ಗೆ ನೀಡಿದ ಮಾಹಿತಿಯಲ್ಲಿ, ಒಟ್ಟು 30 ಮಂದಿ ಈ ಮನೆಯಲ್ಲಿ ವಾಸಿಸುತ್ತಿದ್ದರು. ಆದರೆ ಮಳೆಯ ಕಾರಣದಿಂದಾಗಿ, ಹೆಚ್ಚಿನವರು ತಮ್ಮ ಊರಿಗೆ ಮರಳಿದ್ದರು ಎಂದು ಹೇಳಿದ್ದಾರೆ.
ಕಟ್ಟಡ ಕುಸಿದ ಕೂಡಲೇ ಅಗ್ನಿಶಾಮಕ ದಳ, ಪೊಲೀಸರು ಹಾಗೂ ಸ್ಥಳೀಯರು ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದರು. ಆದರೆ ಅವಶೇಷಗಳಡಿ ಸಿಲುಕಿದ್ದ ಮೂವರಿಗೆ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ. ಕಟ್ಟಡ ಕುಸಿದ ಘಟನೆ ಇಂದು ಬೆಳಗ್ಗೆ ಸುಮಾರು 6 ಗಂಟೆಗೆ ನಡೆದಿದ್ದು, ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಆಸ್ಪತ್ರೆಗೆ ದಾಖಲಿಸಿರುವವರ ಆರೋಗ್ಯ ವರದಿಗಾಗಿ ನಾವು ಕಾಯುತ್ತಿದ್ದೇವೆ ಎಂದು ಉಪಾಧ್ಯಕ್ಷ ರಾಜೀಶ್ ಮಾಹಿತಿ ನೀಡಿದ್ದಾರೆ.
























