ಆಷಾಢಿ ವಾರ್ಕರಿ ಯಾತ್ರೆಯ ಸಂದರ್ಭ ನಡೆದ ಅಹಿತಕರ ಘಟನೆ
ಪುಣೆ : ಪಂಡರಾಪುರದ ವಿಠ್ಠಲನ ಕ್ಷೇತ್ರಕ್ಕೆ ಸಾಗುತ್ತಿದ್ದ ವಾರ್ಕರಿಗಳ ಮೆರವಣಿಗೆಯ ಮೇಲೆ ಮುಸ್ಲಿಂ ಮಹಿಳೆಯೊಬ್ಬಳು ಮಾಂಸ ಮತ್ತು ಮೂಳೆ ಚೂರುಗಳನ್ನು ಎಸೆದು ಅಪವಿತ್ರಗೊಳಿಸಿದ ಘಟನೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಮಹಾರಾಷ್ಟ್ರದ ಪುಣೆಯ ಕ್ಯಾಂಪ್ ಏರಿಯಾದಲ್ಲಿ ಈ ಘಟನೆ ನಡೆದಿದೆ. ಮಾಂಸ ಎಸೆದ ಮಹಿಳೆಯನ್ನು ನಾಸಿಮ್ ಶೇಖ್ (57) ಎಂದು ಗುರುತಿಸಲಾಗಿದೆ. ಜೂನ್ 21ರಂದು ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಪ್ರತಿ ವರ್ಷ ಆಷಾಢಿ ವಾರಿ ಅಥವಾ ಪಂಢರಾಪುರ ವಾರಿ ಎಂಬ ಮೆರವಣಿಗೆ ಪಂಡರಾಪುರ ಕ್ಷೇತ್ರಕ್ಕೆ ಹೋಗುವುದು ವಾಡಿಕೆ. ಇದರಲ್ಲಿ ಭಾಗವಹಿಸುವವರನ್ನು ವಾರ್ಕರಿಗಳು ಎಂದು ಕರೆಯುತ್ತಾರೆ. ಸಂತ ಧ್ಯಾನೇಶ್ವರ ಮತ್ತು ಸಂತ ತುಕರಾಮ ಅವರ ಪಲ್ಲಕ್ಕಿಯನ್ನು ಹೊತ್ತುಕೊಂಡು ಕಾಲ್ನಡಿಗೆಯಲ್ಲಿ ಪಂಡರಾಪುರ ಕ್ಷೇತ್ರಕ್ಕೆ ಸಾಗುವುದೇ ವಾರಿ ಅಥವಾ ವಾರ್ಕರಿ ಮೆರವಣಿಗೆ. ಆಷಾಢ ಏಕಾದಶಿಯಂದು ಪಂಡರಾಪುರದಲ್ಲಿ ರಾಜ್ಯದ ಎಲ್ಲೆಡೆಯಿಂದ ಬಂದ ವಾರ್ಕರಿಗಳು ಒಟ್ಟಾಗಿ ಲಕ್ಷಾಂತರ ಭಕ್ತರ ಜಮಾವಣೆಯಾಗುತ್ತದೆ. ಇದು ಮಹಾರಾಷ್ಟ್ರದ ಪ್ರಮುಖ ಉತ್ಸವಗಳಲ್ಲಿ ಒಂದು.
ಈ ಮೆರವಣಿಗೆ ಪ್ರತಿವರ್ಷ ನಿರ್ದಿಷ್ಟ ಮಾರ್ಗದಲ್ಲೇ ಸಾಗುತ್ತದೆ. ಪುಣೆಯಿಂದ ಸೊಲ್ಲಾಪುರಕ್ಕೆ ಹೋಗುವ ಹೆದ್ದಾರಿಯ ಮಮ್ಮದಾದೇವಿ ಚೌಕದ ಸಮೀಪ ಗಾಯಿಬ್ಪೀರ್ ದರ್ಗಾದ ಬಳಿ ಈ ಅಹಿತಕರ ಘಟನೆ ನಡೆದಿದೆ. ಈ ಕುರಿತು ಛತ್ರಪತಿ ಸಂಭಾಜಿ ನಗರ ನಿವಾಸಿ ಅಕ್ಕಲ್ವಂತ್ ರಾಥೋಡ್ ಎಂಬವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಮ್ಮದಾದೇವಿ ಚೌಕ್ ಬಳಿಯ ಶೇಖ್ ಅವರ ಮನೆಯ ಮುಂಭಾಗದ ರಸ್ತೆಯಲ್ಲಿ ಪಲ್ಲಕ್ಕಿ ಮೆರವಣಿಗೆ ಹಾದುಹೋಗುತ್ತಿದ್ದಾಗ, ಮಹಿಳೆ ಜನರ ಮೇಲೆ ಮಾಂಸ, ಮೂಳೆ ಎಸೆದು, ಏನು ಮಾಡುತ್ತೀರೋ ಮಾಡಿಕೊಳ್ಳಿ ಎಂದು ರಾಥೋಡ್ಗೆ ಎಚ್ಚರಿಕೆ ನೀಡಿದ್ದಳು. ಕೂಡಲೇ ಅವರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಪೊಲೀಸರು ಭಕ್ತರಿಗೆ ಮುಂದೆ ಸಾಗುವಂತೆ ಸೂಚನೆ ನೀಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
























