ವಿಷ ಹಾಕಿ ಕೊಂದಿರುವ ಶಂಕೆ
ಮಂಗಳೂರು : ನಗರದ ಹೊರವಲಯ ನೀರುಮಾರ್ಗದ ಸಮೀಪ ಕೆಲರಾಯಿ ಚರ್ಚ್ ಬಳಿಯ ನಿವಾಸಿಯೊಬ್ಬರು ಸಾಕಿರುವ 7 ದನಗಳು ಸತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ. ಹೈನುಗಾರರಾಗಿರುವ ಜೋಸೆಫ್ ಸ್ಟ್ಯಾನಿ ಪ್ರಕಾಶ್ ಎಂಬವರ ಮನೆಯ 7 ದನಗಳು ಹತ್ತು ದಿನಗಳ ಅವಧಿಯಲ್ಲಿ ಸಾವನ್ನಪ್ಪಿವೆ. ದನಗಳಿಗೆ ಯಾರೋ ವಿಷ ಪದಾರ್ಥ ನೀಡಿ ಸಾಯಿಸಿರುವ ಬಗ್ಗೆ ಅನುಮಾನವಿದೆ.
ಕರು ಇರುವ ಹಾಲು ಕರೆಯುವ, ಗರ್ಭಿಣಿ ಹಸುಗಳು, ದೊಡ್ಡ ಮತ್ತು ಮಧ್ಯಮ ಗಾತ್ರದ ಎತ್ತುಗಳು ಸೇರಿವೆ. ಜೋಸೆಫ್ ಸ್ಟ್ಯಾನಿ ಪ್ರಕಾಶ್ ಸುಮಾರು 50 ವರ್ಷದಿಂದ ಹೈನುಗಾರಿಕೆ ನಡೆಸುತ್ತಿದ್ದು, 30ಕ್ಕೂ ಅಧಿಕ ಜಾನುವಾರುಗಳಿವೆ.
ನಿತ್ಯ ನೀರುಮಾರ್ಗ- ಕೆಲರಾಯಿ ಕಡೆಗೆ ದನಗಳನ್ನು ಮೇಯಲು ಬಿಡುತ್ತೇವೆ. ಇದೇ ಮೊದಲ ಬಾರಿಗೆ ಈ ರೀತಿಯ ಘಟನೆ ನಡೆದಿದೆ. ಮೇಯಲು ಹೋದ ದನಗಳಿಗೆ ಯಾರೋ ವಿಷವುಣಿಸಿದ್ದಾರೆ. ಮನೆಗೆ ಬಂದ ಬಳಿಕ ಒಂದೊಂದೇ ದನ ನಿತ್ರಾಣಗೊಂಡು, ಬಿದ್ದು ಸಾವನ್ನಪ್ಪಿವೆ. ಗುತ್ತಿಗೆ ಬಳಿ ದಪ್ಪವಾಗಿರುವುದು ಕಂಡು ಬಂದಿದೆ ಎಂದು ಜೋಸೆಫ್ ಸ್ಟ್ಯಾನಿ ಪ್ರಕಾಶ್ ತಿಳಿಸಿದ್ದಾರೆ.
ಜೂ.12ರಂದು ಒಂದು ದನ ಸಾವನ್ನಪ್ಪಿದೆ. 13ರಂದು ಪಶು ವೈದ್ಯರು ಬಂದು ರಕ್ತದ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದಾರೆ. ಆರು ದನಗಳು ಮನೆಯಲ್ಲಿಯೇ ಸಾವನ್ನಪ್ಪಿದ್ದು, ಒಂದು ದನ ಮೇಯಲು ಬಿಟ್ಟಲ್ಲಿ ಗುಡ್ಡದಲ್ಲಿಯೇ ಮೃತಪಟ್ಟಿದೆ. ಇನ್ನು ಒಂದು ಜೀವನ್ಮರಣ ಸ್ಥಿತಿಯಲ್ಲಿದೆ. ಸ್ಥಳೀಯವಾಗಿ ಇನ್ನೂ ಕೆಲವರು ದನಗಳನ್ನು ಮೇಯಲು ಬಿಡುತ್ತಿದ್ದಾರೆ. ಆದರೆ ಅವರಿಗೆ ಆ ದನಗಳಿಗೆ ಯಾವುದೇ ಸಮಸ್ಯೆಯಾಗಿಲ್ಲ. ಘಟನೆಯ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿದೆ.
























