ಪುತ್ತೂರು: ಗುರುಕುಲ ಶಿಕ್ಷಣ ಪದ್ಧತಿ ಬ್ರಿಟಿಷರಿಂದ ನಾಶವಾಗಿದೆ. ಇಂದಿನ ಶಿಕ್ಷಣ ಪಠ್ಯಪುಸ್ತಕಗಳಲ್ಲಿ ದೇಶಭಕ್ತಿ ಕಾಣಸಿಗುವುದಿಲ್ಲ ಎಂದು ತಾಲೂಕು ಧರ್ಮ ಶಿಕ್ಷಣ ಸಮಿತಿ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಅಭಿಪ್ರಾಯಪಟ್ಟರು.
ಅವರು ಭಾನುವಾರ ಧರ್ಮ ಶಿಕ್ಷಣ ಸಮಿತಿ ವತಿಯಿಂದ ಕೌಡಿಚ್ಚಾರು ಶ್ರೀಕೃಷ್ಣ ಭಜನಾ ಮಂದಿರದಲ್ಲಿ ಧರ್ಮ ಶಿಕ್ಷಣ ತರಗತಿ ಉದ್ಘಾಟಿಸಿ ಮಾತನಾಡಿದರು.
ನಮ್ಮನ್ನು ನಿರ್ಗತಿಕರನ್ನಾಗಿ ಮಾಡಿದ ಬ್ರಿಟಿಷ್ ಅಧಿಕಾರಿಗಳನ್ನು ವೈಭವೀಕರಿಸುವ ಶಿಕ್ಷಣ ಇನ್ನೂ ಕೂಡ ನಮ್ಮ ಪಠ್ಯ ಪುಸ್ತಕಗಳಲ್ಲಿದೆ. ಮನುಷ್ಯನನ್ನು ಮನುಷ್ಯತ್ವಕ್ಕೇರಿಸುವ ಶಿಕ್ಷಣ ನಮಗೆ ಬೇಕಾಗಿದೆ. ಇಂದಿನ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ಆಗಬೇಕು. ದೇಶಪ್ರೇಮ ಎದ್ದು ಕಾಣಬೇಕು. ಹಿಂದೂ ಧರ್ಮದ ರಕ್ಷಣೆ ಗೋಸ್ಕರ ಇಂದಿನ ಮಕ್ಕಳಿಗೆ ಧಾರ್ಮಿಕಶಿಕ್ಷಣದ ಅವಶ್ಯಕತೆ ಇದೆ ಎಂದರು.
ಕೌಡಿಚ್ಚಾರು ಶ್ರೀ ಕೃಷ್ಣ ಭಜನಾ ಮಂದಿರ ಗೌರವಾಧ್ಯಕ್ಷ ವಾಸು ಪೂಜಾರಿ ಗುಂಡ್ಯಡ್ಕ ಮಾತನಾಡಿ, ಇಂದಿನ ಪೀಳಿಗೆಗೆ ಧರ್ಮ ಶಿಕ್ಷಣದ ಅವಶ್ಯಕತೆ ಇದೆ. ಈ ಶುಭ ಕಾರ್ಯಕ್ಕೆ ಶ್ರೀ ಕೃಷ್ಣನ ಆಶೀರ್ವಾದ ಇರಲಿ ಎಂದು ಶುಭ ಹಾರೈಸಿದರು.
ಧರ್ಮ ಶಿಕ್ಷಣದ ತಾಲೂಕು ಸಮಿತಿ ಅಧ್ಯಕ್ಷ ಸದಾಶಿವ ರೈ ದಂಬೆಕಾನ ಮಾತನಾಡಿ, ಪ್ರತಿಯೊಬ್ ಹಿಂದೂವಿಗೂ ಧಾರ್ಮಿಕ ಶಿಕ್ಷಣದ ಅವಶ್ಯಕತೆ ಇದೆ. ಧಾರ್ಮಿಕ ಶಿಕ್ಷಣ ಸಿಗದೇ ನಾವು ಸೋತಿದ್ದೇವೆ. ಆದರೆ ನಮ್ಮ ಪೀಳಿಗೆ ಸೋಲಾಗಬಾರದು ಎಂದರು.
ಗ್ರಾಮದೈವ ಕುತ್ಯಾಡಿ ಧೂಮಾವತಿ ದೈವಸ್ಥಾನದ ಪ್ರಧಾನ ಕರ್ಮಿ ಸದಾಶಿವ ಮಣಿಯಾಣಿ, ಧರ್ಮ ಶಿಕ್ಷಣ ತಾಲೂಕು ಸಮಿತಿ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಬೋರ್ಕರ್ ಕೋಡಿಂಬಾಡಿ, ಕೌಡಿಚ್ಚಾರು ಶ್ರೀ ಕೃಷ್ಣ ಭಜನಾ ಮಂದಿರದ ಅಧ್ಯಕ್ಷ ರಾಮದಾಸ್ ರೈ, ಶುಭ ಹಾರೈಸಿದರು.
ಕೌಡಿಚ್ಚಾರು ಧರ್ಮ ಶಿಕ್ಷಣ ಸಮಿತಿ ಅಧ್ಯಕ್ಷ ದೀಪಕ್ ಕುಲಾಲ್ಅಧ್ಯಕ್ಷತೆ ವಹಿಸಿದ್ದರು. ಈ ಅಕ್ಷರ, ತ್ರಿಶಾನಿ, ಅನುಷಾ ಪ್ರಾರ್ಥಿಸಿದರು. ತಿಲಕ್ ರೈ ಕುತ್ಯಾಡಿ ಸ್ವಾಗತಿಸಿ, ಶಾಂಭವಿ ಕುತ್ಯಾಡಿ ವಂದಿಸಿದರು. ಕೀರ್ತಿ ಮಾಯಿಲಕೊಚ್ಚಿ ಕಾರ್ಯಕ್ರಮ ನಿರೂಪಿಸಿದರು.
























