ಕಾಡು ಪ್ರಾಣಿಗಳ ಜತೆಗೆ ಆನೆ ದಾಳಿಯಿಂದ ಕೃಷಿಕರನ್ನು ರಕ್ಷಿಸಬೇಕು : ಪತ್ರಿಕಾಗೋಷ್ಠಿಯಲ್ಲಿ ಯಂ.ಜಿ.ಸತ್ಯನಾರಾಯಣ ಆಗ್ರಹ

ಪುತ್ತೂರು: ದ.ಕ.ಜಿಲ್ಲೆಯ ಪುತ್ತೂರು, ಸುಳ್ಯ, ಬಂಟ್ವಾಳ, ಕಡಬ ಹಾಗೂ ಬೆಳ್ತಂಗಡಿ ತಾಲೂಕುಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಜತೆ ಮುಖ್ಯವಾಗಿ ಆನೆ ದಾಳಿಯಿಂದಾಗಿ ಕೃಷಿಕರು ಕಂಗಾಲಾಗಿದ್ದು, ಕಾಡು ಪ್ರಾಣಿಗಳ ಉಪಟಳದಿಂದ ರಕ್ಷಣೆಯ ಜತೆಗೆ ಬೆಳೆನಾಶಕ್ಕೆ ಪರಿಹಾರ ನೀಡಬೇಕು ಎಂದು ಭಾರತೀಯ ಕಿಸಾಸ್‍ಸಂಘದ ಜಿಲ್ಲಾಧ್ಯಕ್ಷ  ಯಂ.ಜಿ.ಸತ್ಯನಾರಾಯಣ ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈಗಾಗಲೇ ಈ ಕುರಿತು ಅರಿಯಡ್ಕ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸಂತ್ರಸ್ತ ರೈತ ಸದಸ್ಯರ ಸಭೆ ಕರೆದು ಈ ವಿಚಾರವನ್ನು ಸಂಬಂಧ ಪಟ್ಟ ಇಲಾಖೆ ಹಾಗೂ ರಾಜ್ಯ ಸರಕಾರದ ಕಾರ್ಯದರ್ಶಿಯವರಿಗೆ ಮನವಿ ಮಾಡಿದ್ದೇವೆ ಎಂದರು.

ಪುತ್ತೂರು ತಾಲೂಕಿನ ಕಾವು, ಅರಿಯಡ್ಕ, ಪೆರ್ಲಂಪಾಡಿ, ಮಾಡನ್ನೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ 6 ತಿಂಗಳಿನಿಂದ ಆನೆ ಉಪಟಳ ಜಾಸ್ತಿಯಾಗಿದೆ. ಅಲ್ಲದೆ ಸೆಲ್ವಮ್ ಎಂಬ ಮಹಿಳೆಯೊಬ್ಬರ ಜೀವಹಾನಿಯಾಗಿದೆ. ಈ ಕುರಿತು ಜಿಲ್ಲೆಯ ಸಂಸದ ಬ್ರಿಜೇಶ್‍ಚೌಟ, ವಿಧಾನ ಪರಿಷತ್ ಸದಸ್ಯ ಕಿಶೋರ್ ಬೊಟ್ಯಾಡಿ ಅವರಿಗೆ ಜು.17 (ಮಂಗಳವಾರ) ಮನವರಿಕೆ ಮಾಡಿ, ಅವರ ಸಹಕಾರದಿಂದ ಮಂಗಳೂರು ಅರಣ್ಯ ಸಂರಕ್ಷಣಾಧಿಕಾರಿ ಡಾ.ಕರಿಕಾಲನ್‍ಅವರಿಗೆ ಮನವಿ ಸಲ್ಲಿಸಿ ಮಾತುಕತೆಯನ್ನೂ ನಡೆಸಿದ್ದೇವೆ. ಈ ಸಂದರ್ಭದಲ್ಲಿ ಅರಣ್ಯ ಸಂರಕ್ಷಣಾಧಿಕಾರಿಗಳು ಕಾಡಾನೆಯ ಚಲನವಲನಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ವರದಿ ಪಡೆದು, ಮುಂದಿನ ಎರಡು ವಾರಗಳಲ್ಲಿ ಕಾಡಾನೆ ನಿಯಂತ್ರಣ, ಸ್ಥಳಾಂತರ ಕಾರ್ಯ ಮಾಡುವುದಾಗಿ ಭರವಸೆ ನೀಡಿದ್ದು, ಪುತ್ತೂರಿನಲ್ಲಿ ಅರಣ್ಯಾಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ಕರೆದು ಮಾಹಿತಿ ಕಲೆ ಹಾಕುವಂತೆ ಸೂಚನೆ ನೀಡಲಾಗುವ ಕುರಿತು ತಿಳಿಸಿದ್ದಾರೆ ಎಂದು ಹೇಳಿದರು.



















































 
 

ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಕಿಸಾನ್‍ ಸಂಘದ ಜಿಲ್ಲಾ ಕಾರ್ಯದರ್ಶಿ ರಾಮ ಪ್ರಸಾದ್‍, ತಾಲೂಕು ಘಟಕದ ಅಧ್ಯಕ್ಷ ಜನಾರ್ದನ ರೈ, ದಿವ್ಯಾಪ್ರಸಾದ್‍ ಕಾವು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top